ನವದೆಹಲಿ: ಲಾಕ್ಡೌನ್ನಿಂದಾಗಿ ವಿವಿಧ ರಾಜ್ಯಗಳಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಹಾಗೂ ವಲಸಿಗರನ್ನು ಸುರಕ್ಷಿತವಾಗಿ ಅವರವರ ರಾಜ್ಯಗಳಿಗೆ ತಲುಪಿಸಲು ವಿವಿಧ ರಾಜ್ಯಗಳು ವಿಶೇಷ ರೈಲುಗಳನ್ನು ವ್ಯವಸ್ಥೆಗೊಳಿಸಿವೆ. ಅದರಂತೆ ತೆಲಂಗಾಣದಿಂದ ಜಾರ್ಖಂಡ್ಗೆ ವಲಸೆ ಕಾರ್ಮಿಕರನ್ನು ರವಾನಿಸಲು ರೈಲ್ವೆ ಇಲಾಖೆ ವ್ಯವಸ್ಥೆಗೊಳಿಸಿದ್ದ ವಿಶೇಷ ರೈಲು ತೆಲಂಗಾಣದ ಲಿಂಗಂಪಲ್ಲಿಯಿಂದ ಜಾರ್ಖಂಡ್ನತ್ತ ಶುಕ್ರವಾರ ಪ್ರಯಾಣ ಬೆಳೆಸಿತು.
ತೆಲಂಗಾಣ ರಾಜ್ಯ ಸರ್ಕಾರದ ಕೋರಿಕೆ ಮೇರೆಗೆ ವ್ಯವಸ್ಥೆಗೊಳಿಸಲಾಗಿದ್ದ ಈ ರೈಲಿನ 22 ಬೋಗಿಗಳಲ್ಲಿ 1 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಪ್ರಯಾಣ ಬೆಳೆಸಿದ್ದಾಗಿ ದಕ್ಷಿಣ ಮಧ್ಯ ರೈಲ್ವೆ ವಕ್ತಾರ ಸಿ.ಎಚ್. ರಾಜೇಶ್ ತಿಳಿಸಿದ್ದಾರೆ.
ಇದು ಒಂದು ವಿಶೇಷ ರೈಲು. ಸಧ್ಯಕ್ಕೆ ಹೆಚ್ಚುವರಿ ರೈಲುಗಳನ್ನು ಓಡಿಸಲು ಸಚಿವಾಲಯದಿಂದ ಯಾವುದೇ ನಿರ್ದೇಶನಗಳಿಲ್ಲ ಎಂದು ತಿಳಿಸಿದ್ದಾರೆ.
ಲಾಕ್ಡೌನ್ನಿಂದಾಗಿ ಜಾರ್ಖಂಡ್ ಮೂಲದ 1200 ಜನ ವಲಸೆ ಕಾರ್ಮಿಕರು ಹೈದರಾಬಾದ್ನ ಸಂಗಾರೆಡ್ಡಿ ಜಿಲ್ಲೆಯ ಐಐಟಿ ಕ್ಯಾಂಪಸ್ ನಲ್ಲಿ ಸಿಲುಕಿಕೊಂಡಿದ್ದರು.
ಅತ್ತ ತಮ್ಮ ಊರಿಗೂ ಹೋಗಲಾರದೆ, ಇತ್ತ ಗುತ್ತಿಗೆದಾರನಿಂದ ವೇತನವೂ ಸಿಗದ ಹಿನ್ನೆಲೆಯಲ್ಲಿ ಹತಾಶರಾಗಿದ್ದ ಬಿಹಾರ ಮತ್ತು ಜಾರ್ಖಂಡ್ ಮೂಲದ ಈ ಕಾರ್ಮಿಕರು ಪೊಲೀಸರ ಮೇಲೆ ಬುಧವಾರ ಹಲ್ಲೆ ನಡೆಸಿದ್ದರು.
ತಕ್ಷಣವೇ ಮಧ್ಯಪ್ರವೇಶಿಸಿದ್ದ ಸಂಗಾರೆಡ್ಡಿ ಜಿಲ್ಲಾಡಳಿತ ಪ್ರತಿಭಟನಾನಿರತರನ್ನು ಸಮಾಧಾನಗೊಳಿಸಿದ್ದರು. ಅಲ್ಲದೆ, ತಮ್ಮ ತಮ್ಮ ಊರುಗಳಿಗೆ ತೆರಳಲು ಸೂಕ್ತ ಏರ್ಪಾಡು ಮಾಡುವ ಭರವಸೆ ನೀಡಿ, ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರು.
ಲಾಕ್ಡೌನ್ನಲ್ಲಿ ವಿವಿಧ ರಾಜ್ಯಗಳಲ್ಲಿ ಸಿಲುಕಿರುವ ಕಾರ್ಮಿಕರು, ವಿದ್ಯಾರ್ಥಿ, ಪ್ರವಾಸಿಗರಿಗೆ ಸಿಹಿ ಸುದ್ದಿ