| ಮಂಜುನಾಥ ಕೆ. ಬೆಂಗಳೂರು
ಕಾಲೇಜು ಶಿಕ್ಷಣ ಇಲಾಖೆ ಮುಖ್ಯ ಕಚೇರಿ, ಉನ್ನತ ಶಿಕ್ಷಣ ಪರಿಷತ್ತು ಹಾಗೂ ಜಂಟಿ ನಿರ್ದೇಶಕರ ಕಚೇರಿಗಳಿಗೆ ನಿಯೋಜನೆಗೊಂಡಿರುವ ಬೋಧಕರು ಸ್ಪೆಷಲ್ ಆಫೀಸರ್ (ವಿಶೇಷ ಅಧಿಕಾರಿ) ಆಗಿ ಕಾರ್ಯ ನಿರ್ವಹಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಅಸಲಿಗೆ ಸ್ಪೆಷಲ್ ಆಫೀಸರ್ ಹುದ್ದೆಯೇ ಇಲ್ಲ. ಆದರೂ ಕೆಲವರು ಹಣ ಕೊಟ್ಟು ಮತ್ತೆ ಕೆಲವರು ರಾಜಕಾರಣಿಗಳ ಶಿಫಾರಸ್ಸಿನ ಮೇರೆಗೆ ಈ ರೀತಿಯ ಹುದ್ದೆ ಅಲಂಕರಿಸಿದ್ದಾರೆ.
ಸಹ ಪ್ರಾಧ್ಯಾಪಕರು ಹಾಗೂ ಸಹಾಯಕ ಪ್ರಾಧ್ಯಾಪಕರಾಗಿ ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಮಾರು 60-65 ಜನ ವಿಶೇಷ ಅಧಿಕಾರಿಗಳಾಗಿ ನಿಯೋಜನೆಗೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಲೇಜು ಶಿಕ್ಷಣ ಇಲಾಖೆ ಇವರಿಗೆ ಬೋಧನೆ ಮಾಡಲು ಸಂಬಳ ನೀಡುತ್ತಿದೆ. ಆದರೆ ಇವರು ಕ್ಲರಿಕಲ್ ಕೆಲಸ ಮಾಡುತ್ತಿದ್ದಾರೆ. ಜತೆಗೆ ಇಲಾಖೆಯಲ್ಲಿ ಹೆಚ್ಚಿನ ಸೌಲಭ್ಯ ಮತ್ತು ಬಡ್ತಿ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಯುಜಿಸಿ ಸ್ಕೇಲ್ ಸಂಬಳ!: ಯುಜಿಸಿ ಸ್ಕೇಲ್ನಲ್ಲಿ 1ರಿಂದ 2 ಲಕ್ಷ ರೂ. ಸಂಬಳ ನೀಡಲಾಗುತ್ತಿದೆ. ಬೋಧನೆ ಮಾಡದೇ ಬರೀ ಕ್ಲರಿಕಲ್ ಜಾಬ್ ಮಾಡುತ್ತಿರುವ ಇಂತವರಿಗೆ ಯುಜಿಸಿ ಸ್ಕೇಲ್ ಸಂಬಳ ನೀಡಲಾಗುತ್ತಿದೆ. ಕ್ಲರಿಕಲ್ ಕೆಲಸ ಮಾಡುತ್ತಿರುವವರಿಗೆ ಸ್ಟೇಟ್ ಸ್ಕೇಲ್ ಸಂಬಳ ನೀಡಬೇಕು ಎಂಬುದು ಕೆಲ ಪ್ರಾಧ್ಯಾಪಕರ ವಾದವಾಗಿದೆ.
ಮಾನದಂಡ ಗಾಳಿಗೆ?: ಆರ್ಟಿಕಲ್ ಪಬ್ಲಿಷ್ ಮಾಡಿರಬೇಕು, ಸಂಶೋಧನೆ ಮಾಡಿರಬೇಕು, ಪ್ರಶ್ನೆಪತ್ರಿಕೆಗಳ ಮೌಲ್ಯಮಾಪನ ಮಾಡಿರಬೇಕು, ಇತಿಷ್ಟು ಗಂಟೆ ಬೋಧನೆ ಮಾಡಿರಬೇಕು ಎಂಬಿತ್ಯಾದಿ ನಿಯಮ ಬಡ್ತಿ ನೀಡಲು ಇವೆ. ಆದರೆ ಹಣ ಕೊಟ್ಟು ಹಾಗೂ ರಾಜಕಾರಣಿಗಳ ಶಿಫಾರಸ್ಸು ಪಡೆದು ಬರುವ ಕೆಲ ಬೋಧಕರಿಗೆ ವಿಶೇಷ ಅಧಿಕಾರಿಯನ್ನಾಗಿ ಮಾಡಿ ಬಡ್ತಿ ನೀಡಿ ಹೆಚ್ಚಳ ಸಂಬಳ ಪಡೆಯುವಂತೆ ಮಾಡಲಾಗಿದೆ ಎನ್ನಲಾಗಿದೆ.
ಕೆಲವರು ಹಣಕೊಟ್ಟು, ಮತ್ತೆ ಕೆಲವು ಪ್ರಾಧ್ಯಾಪಕರು ರಾಜಕಾರಣಿಗಳ ಶಿಫಾರಸಿನ ಮೇರೆಗೆ ಕಾಲೇಜು ಶಿಕ್ಷಣ ಇಲಾಖೆಯ ಮುಖ್ಯ ಕಚೇರಿ, ಉನ್ನತ ಶಿಕ್ಷಣ ಪರಿಷತ್ತು ಹಾಗೂ ಜಂಟಿ ನಿರ್ದೇಶಕರ ಕಚೇರಿಗಳಿಗೆ ನಿಯೋಜನೆಗೊಂಡಿದ್ದಾರೆ. ಪ್ರಾಮಾಣಿಕವಾಗಿ ಬೋಧನೆ ಮಾಡುತ್ತಿರುವ ಪ್ರಾಧ್ಯಾಪಕರ ಮೇಲೆಯೇ ದಬ್ಬಾಳಿಕೆ ಮಾಡುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ ಸರಿಪಡಿಸಬೇಕು.
| ನೊಂದ ಪ್ರಾಧ್ಯಾಪಕರು
ದಬ್ಬಾಳಿಕೆ: ಆನ್ಲೈನ್ ದಾಖಲಾತಿ ಮಾಡಿ, ಎಲ್ಎಂಎಸ್ ಮಾಡಿ, ಸ್ಟಡಿ ಮೆಟಿಯರಿಲ್ ಕಂಟೆಟ್ ತಯಾರು ಮಾಡಿ ಎಂದು ವಿಶೇಷ ಅಧಿಕಾರಿಗಳು ಎನಿಸಿಕೊಂಡಿರುವವರು ಕಷ್ಟು ಕೆಲಸ ಮಾಡುತ್ತಿರುವ ಹಿರಿಯ ಬೋಧಕರಿಗೆ ಆರ್ಡರ್ ಮಾಡುತ್ತಿದ್ದಾರೆ. 2017-19ರ ಬ್ಯಾಚ್ನ ನೇಮಕವಾಗಿರುವ ಸಹ ಪ್ರಾಧ್ಯಾಪಕರು ಹಾಗೂ ಸಹಾಯಕ ಪ್ರಾಧ್ಯಾಪಕರನ್ನು ಸಹ ವಿಶೇಷ ಅಧಿಕಾರಿಯನ್ನಾಗಿ ನಿಯೋಜನೆ ಮಾಡಲಾಗಿದೆ. ಇವರು ತಮಗಿಂತ ಹಿರಿಯ ಬೋಧಕರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ವಿಶೇಷ ಅಧಿಕಾರಿಗಳಿಗೆ ಇಎಲ್ ಸೌಲಭ್ಯವಿದೆ. 2ನೇ ಶನಿವಾರ ಹಾಗೂ 4 ನೇ ಶವಿವಾರ ರಜೆ ಇರುತ್ತದೆ. ವರ್ಷಕ್ಕೆ 30 ದಿನ ಅರ್ನ್ ಲೀವ್ ತೆಗೆದುಕೊಳ್ಳುತ್ತಿದ್ದಾರೆ. ಈ ಸೌಲಭ್ಯ ಬೋಧನೆ ಮಾಡುತ್ತಿರುವವರಿಗೆ ನೀಡುತ್ತಿಲ್ಲ ಎನ್ನಲಾಗಿದೆ.
ಎಲ್ಲೆಲ್ಲಿ ಎಷ್ಟು ಹುದ್ದೆ?: ಬೆಂಗಳೂರಿನ ಕಾಲೇಜು ಶಿಕ್ಷಣ ಮುಖ್ಯ ಕಚೇರಿಯಲ್ಲಿ ಸುಮಾರು 30, ಉನ್ನತ ಶಿಕ್ಷಣ ಪರಿಷತ್ತಿನಲ್ಲಿ 3, ಜೆಡಿ ಕಚೇರಿಯಲ್ಲಿ 8, ಮಂಗಳೂರು, ಮೈಸೂರು, ಶಿವಮೊಗ್ಗ, ಮಂಗಳೂರು ಧಾರವಾಡ ಸೇರಿ ವಿವಿಧ ಜೆಡಿ ಕಚೇರಿಗಳಲ್ಲಿ ಒಟ್ಟಾರೆ 65ಕ್ಕೂ ಹೆಚ್ಚಿನ ಬೋಧಕರು ವಿಶೇಷ ಅಧಿಕಾರಿಗಳಾಗಿದ್ದಾರೆ.
ಖ್ಯಾತ ನಟನಿಗೆ ಕ್ಯಾನ್ಸರ್, ಧನಸಹಾಯಕ್ಕಾಗಿ ಸಾರ್ವಜನಿಕರಲ್ಲಿ ಕೋರಿಕೆ..
ವರ್ಷಾಂತ್ಯದಲ್ಲಿ ನಭಕ್ಕೆ ನೆಗೆಯಲಿದೆ ‘ಪುನೀತ್’ ಉಪಗ್ರಹ; ಉಡಾವಣೆಗೆ ತೆರಳಲಿದ್ದಾರೆ ಸಾವಿರ ವಿದ್ಯಾರ್ಥಿಗಳು..