ಉಡುಪಿ: ಹಾಲಾಡಿ ಬಸ್ ನಿಲ್ದಾಣದಲ್ಲಿ ಇತ್ತೀಚೆಗೆ ಪತ್ತೆಯಾಗಿ ರಾಜ್ಯ ಮಹಿಳಾ ನಿಲಯಕ್ಕೆ ದಾಖಲಾಗಿದ್ದ ಮಹಿಳೆಯೊಬ್ಬರು 80 ದಿನಗಳ ನಂತರ ಮಗನೊಂದಿಗೆ ತೆರಳಿದ್ದಾರೆ.
ಮೂಲತಃ ಬೆಂಗಳೂರಿನ ಕೆಂಚಮ್ಮ ಪೂಜಾರಿ (58) ಮನನೊಂದು ಉಡುಪಿಗೆ ಬಂದಿದ್ದರು. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹಾಲಾಡಿಗೆ ತೆರಳಿ ಬಸ್ ನಿಲ್ದಾಣದಲ್ಲಿ ನೆಲೆ ಕಂಡಿದ್ದರು.
ಜೋರು ಮಳೆಗಾಳಿಗೆ ನಿಂತಿದ್ದ ಇವರನ್ನು ಕಂಡ ಸ್ಥಳೀಯರು ಸಮಾಜಸೇವಕ ವಿಶು ಶೆಟ್ಟಿಯವರಿಗೆ ಮಾಹಿತಿ ನೀಡಿದ್ದು, ಅಗಸ್ಟ್ 8 ರಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಸಹಾಯದಿಂದ ನಿಟ್ಟೂರಿನ ರಾಜ್ಯ ಮಹಿಳಾ ನಿಲಯಕ್ಕೆ ದಾಖಲಿಸಲಾಗಿತ್ತು.
ಅಧಿಕಾರಿಗಳ ನೆರವಿನಿಂದ ಮಹಿಳೆಯ ಮಗನನ್ನು ಪತ್ತೆ ಹಚ್ಚಲಾಗಿದ್ದು, ಮಗ ಗಿರೀಶ್ ಜತೆಗೆ ಮಹಿಳೆ ತೆರಳಿದ್ದಾರೆ. ಮಹಿಳಾ ಠಾಣಾಧಿಕಾರಿ ಫೆಮಿನಾ ಕಾನೂನು ಪ್ರಕ್ರಿಯೆ ನಡೆಸಿ ಮಗನಿಗೆ ಹಸ್ತಾಂತರಿಸಿದ್ದಾರೆ.