ನವದೆಹಲಿ: ಇಡೀ ಜಗತ್ತು ಕೊವಿಡ್-19ರ ವಿರುದ್ಧ ಹೋರಾಡುತ್ತಿದ್ದರೆ, ಕೆಲವು ಜನರು ಬೇರೆ ಕೆಲವು ವೈರಸ್ಗಳನ್ನು ಹರಡುವಲ್ಲಿ ಬಿಜಿಯಾಗಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದು ಅಲಿಪ್ತ ಚಳವಳಿ ರಾಷ್ಟ್ರಗಳ ಶೃಂಗಸಭೆ (ನಾಮ್)ಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಸದ್ಯ ಕರೊನಾ ವೈರಸ್ ಬಿಕ್ಕಟ್ಟು ಹೆಚ್ಚಾಗಿದೆ. ಇಡೀ ವಿಶ್ವ ಕೊವಿಡ್ ವಿರುದ್ಧ ಹೋರಾಡುತ್ತಿದೆ. ಇದೇ ಸಮಯದಲ್ಲಿ ಕೆಲವರು ಭಯೋತ್ಪಾದನೆ, ನಕಲಿ ಸುದ್ದಿಗಳಂತಹ ಮಾರಕ ವೈರಸ್ ಹರಡುವ ಮೂಲಕ ಸಮುದಾಯ, ದೇಶವನ್ನು ಒಡೆಯುತ್ತಿದ್ದಾರೆ ಎಂದಿದ್ದಾರೆ. ಈ ಮೂಲಕ ಪಾಕಿಸ್ತಾನದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಪ್ರಜಾಪ್ರಭುತ್ವ, ಶಿಸ್ತು ಮತ್ತು ನಿಶ್ಚಿತತೆಗಳಿಂದ ಜನಾಂದೋಲನ ಸೃಷ್ಟಿಸಬಹುದು ಎಂದು ನಾವು ಈ ಕರೊನಾ ಸಂಕಷ್ಟದ ಕಾಲದಲ್ಲಿ ತೋರಿಸಿದ್ದೇವೆ. ಭಾರತೀಯರು ಇಡೀ ವಿಶ್ವವನ್ನು ಒಂದು ಕುಟುಂಬದಂತೆ ನೋಡುತ್ತೇವೆ. ನಾವು ನಮ್ಮ ದೇಶದ ಜನರ ಸುರಕ್ಷತೆಯ ಜತೆಗೆ ಇತರ ರಾಷ್ಟ್ರಗಳಿಗೂ ಕೊವಿಡ್ ಎದುರಿಸಲು ಸಹಾಯ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ಕೆಎಸ್ಆರ್ಟಿಸಿಗೆ ಕೊಟ್ಟ ಚೆಕ್ ಮೇಲೆ ನನ್ನ ಸಹಿ ಇಲ್ಲ..ಹಾಗಾಗಿ ಅದು ನಕಲಿ ಎಂದು ಅಶೋಕಣ್ಣ ಹೇಳಿದಾರೆ..ಆದ್ರೆ….’
ನಾವು ನಮ್ಮ ನೆರೆರಾಷ್ಟ್ರಗಳಿಗೆ ವೈದ್ಯಕೀಯ ಸಹಾಯ ಮಾಡಿದ್ದೇವೆ. ನಮ್ಮ ದೇಶದ ವೈದ್ಯಕೀಯ ತಜ್ಞರು ಅಗತ್ಯ ಇರುವ ರಾಷ್ಟ್ರಗಳ ವೈದ್ಯಕೀಯ ಸಿಬ್ಬಂದಿಗೆ ಆನ್ಲೈನ್ ಮೂಲಕವೇ ತರಬೇತಿ ನೀಡುತ್ತಿದ್ದಾರೆ. ಇವತ್ತು ಇಡೀ ಮನುಕುಲ ಕೊವಿಡ್-19ರಿಂದ ತೀವ್ರ ಸಂಕಷ್ಟಕ್ಕೀಡಾಗಿದೆ. ಈ ಸಮಯದಲ್ಲಿ ನಾಮ್ ಜಾಗತಿಕ ಒಗ್ಗಟ್ಟನ್ನು ಪ್ರೋತ್ಸಾಹಿಸಬೇಕು ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. (ಏಜೆನ್ಸೀಸ್)
ಇದನ್ನೂ ಓದಿ: ಜಗತ್ತಿನಾದ್ಯಂತ ಏರುಗತಿಯಲ್ಲಿದೆ ಚೀನಾ ವಿರೋಧಿ ಭಾವನೆ!