ಬೆಳ್ತಂಗಡಿ: ಲಾಯಿಲ ಗ್ರಾಮದ ಪುತ್ರಬೈಲು ನಿವಾಸಿ ಪ್ರವೀಣ್ ಎಂಬುವರ ನಿಲ್ಲಿಸಿದ್ದ ಕಾರಿನಲ್ಲಿ ನಾಗರಹಾವಿನ ಮರಿ ಪತ್ತೆಯಾಗಿದೆ.
ಪತ್ನಿ, ಪುತ್ರನೊಂದಿಗೆ ಬೆಳ್ತಂಗಡಿಗೆ ಬಂದಿದ್ದ ಪ್ರವೀಣ್ ಕಾರು ಪಾರ್ಕ್ ಮಾಡಿ ಮೆಡಿಕಲ್ಗೆ ತೆರಳಿದ್ದರು. ವಾಪಸಾಗಿ ಪ್ರವೀಣ್ ಚಾಲಕನ ಸೀಟಿನಲ್ಲಿ ಕುಳಿತಿದ್ದರು.
ಪತ್ನಿ ಮತ್ತು ಮಗ ಹಿಂಭಾಗದ ಸೀಟಿನಲ್ಲಿ ಕೂರಲು ಬಾಗಿಲು ತೆರೆದಾಗ ಕಾರಿನ ಸೀಟಿನಡಿ ಹಾವಿನ ಮರಿ ಕಂಡಿದೆ. ತಕ್ಷಣ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.
ಉಜಿರೆಯ ಸ್ನೇಕ್ ಜಾಯ್ ಒಂದು ಗಂಟೆ ಕಾರ್ಯಾಚರಣೆ ನಡೆಸಿದರೂ ಹಾವನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಬಳಿಕ ಬೆಳ್ತಂಗಡಿ ಮೂರು ಮಾರ್ಗದ ಸರ್ವಿಸ್ ಸ್ಟೇಷನ್ಗೆ ಕಾರನ್ನು ತೆಗೆದುಕೊಂಡು ಹೋಗಿ ಕಾರಿನ ಸುತ್ತಮುತ್ತ ನೀರು ಹಾಯಿಸಿದಾಗ ಸ್ಟೇರಿಂಗ್ ಭಾಗದಲ್ಲಿ ಅಡಗಿದ್ದು ಹಾವು ಹೊರಬಂದಿದೆ.