ಚಿಕ್ಕಮಗಳೂರು: ಇಲ್ಲಿನ ಇಂಜಿನಿಯರಿಂಗ್ ಕಾಲೇಜಿಗೆ ಸೋಮವಾರ ರಾತ್ರಿ ಹೆಬ್ಬಾವು ಬಂದಿದ್ದು, ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಯಿತು.
ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಆವರಣ ಪ್ರವೇಶಿಸಿದ್ದ 13 ಅಡಿ ಉದ್ದದ ಹೆಬ್ಬಾವನ್ನು ಸೋಮವಾರ ರಾತ್ರಿ ಗಮನಿಸಿದ ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್, ಪ್ರಾಚಾರ್ಯ ಡಾ. ಸಿ.ಟಿ.ಜಯದೇವ್ ಅವರಿಗೆ ದೂರವಾಣಿ ಮೂಲಕ ತಿಳಿಸಿದರು. ಸಿಬ್ಬಂದಿ ನೋಡುತ್ತಿದ್ದಂತೆ ಹಾವು ಕಾಲೇಜಿನ ಹಳೇ ಹಾಸ್ಟೆಲ್ ಕಡೆಯಿಂದ ಆಡಳಿತ ಕಚೇರಿ ಹೋಗಿ ಪ್ರಾಚಾರ್ಯರ ಕೊಠಡಿ ಸಮೀಪ ಮಲಗಿತು. ಸ್ನೇಕ್ ನರೇಶ್ ಅವರಿಗೆ ಮಾಹಿತಿ ನೀಡಿ ಕಾಲೇಜಿಗೆ ಕರೆಸಲಾಯಿತು.
ನಾಗರಹಾವು ಅಥವಾ ಕೊಳಕ ಮಂಡಲ ಇರಬಹುದೆಂಬ ಊಹೆಯಿಂದ ಬಂದಿದ್ದ ಸ್ನೇಕ್ ನರೇಶ್ ಹೆಬ್ಬಾವನ್ನು ಕಂಡು ಅಚ್ಚರಿಗೊಂಡರು. ಪುನಃ ಮನೆಗೆ ತೆರಳಿದ ನರೇಶ್ ಸ್ನೇಕ್ ಸ್ಟಿಕ್ ತೆಗೆದುಕೊಂಡು ಬಂದು ಹಾವನ್ನು ಹಿಡಿದು ಚೀಲದೊಳಗೆ ಹಾಕಿದರು. 35 ಕೆಜಿ ಇದ್ದ ಹೆಬ್ಬಾವನ್ನು ಗಾರ್ಡ್ ಇಬ್ಬರ ಸಹಕಾರ ಪಡೆದು ವಾಹನದಲ್ಲಿ ತೆಗೆದುಕೊಂಡು ಹೋಗಿ ರಾತ್ರಿ 12 ಗಂಟೆ ಸಮಯದಲ್ಲಿ ಚುರ್ಚೆ ಗುಡ್ಡದಲ್ಲಿ ಬಿಟ್ಟರು.
ವನ್ಯಜೀವಿ ಸಪ್ತಾಹದ ಸಂದರ್ಭದಲ್ಲಿ ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಈ ಅಪರೂಪದ ಅತಿಥಿ ಸುರಕ್ಷಿತವಾಗಿ ಸ್ವಸ್ಥಾನಕ್ಕೆ ಸೇರಿದೆ. ಗಾಬರಿಗೊಂಡಿದ್ದ ಕಾಲೇಜು ಸಿಬ್ಬಂದಿ, ಸೆಕ್ಯೂರಿಟಿ ಗಾರ್ಡ್ಗಳು ನಿಟ್ಟುಸಿರು ಬಿಟ್ಟಿದ್ದಾರೆ.