ನವದೆಹಲಿ: ಕೋವಿಡ್ ನಿರ್ಬಂಧದ ಸಂದರ್ಭದಲ್ಲಿ ಬಾಡಿಗೆ ವಿಮಾನಗಳಲ್ಲಿ ರಾಜತಾಂತ್ರಿಕ ಸರಕುಗಳೊಂದಿಗೆ 30 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದರಿಂದಲೇ ಹಗರಣ ಬಯಲಾಗಿ ಠಕ್ಕರು ಸಿಕ್ಕಿಬಿದ್ದರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಕುರಿತು 2ನೇ ಎಫ್ಐಆರ್ ದಾಖಲಿಸಿರುವ ಎನ್ಐಎ, ತಿರುವನಂತಪುರದ ಯುಎಇ ಕೌನ್ಸಲ್ ಜನರಲ್ ಕಚೇರಿಯ ಸರಕಿನೊಂದಿಗೆ 30 ಕೆ.ಜಿ. ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದರ ಬಗ್ಗೆ ನಾಲ್ವರ ವಿರುದ್ಧ ಭಯೋತ್ಪಾದನಾ ಕೃತ್ಯ ಸಂಬಂಧಿತ ಆರೋಪಗಳನ್ನು ಹೊರಿಸಿದ್ದಾರೆ.
ಪ್ರಕರಣದ ತನಿಖೆಯನ್ನು ಶುಕ್ರವಾರ ವಹಿಸಿಕೊಂಡಿರುವ ಎನ್ಐಎ, ಕಳ್ಳಸಾಗಣೆಯ ಚಿನ್ನದ ಮಾರಾಟದಿಂದ ಬರುತ್ತಿದ್ದ ಹಣವನ್ನು ಭಾರತದಲ್ಲಿ ಭಯೋತ್ಪಾದನಾ ಕೃತ್ಯ ಎಸಗಲು ಬಳಸಲಾಗುತ್ತಿತ್ತು ಎಂದು ಹೇಳಿದೆ.
ಕಳ್ಳಸಾಗಣೆಯ ಮಾಲು ಈ ಹಿಂದೆ ನಿಯಮಿತವಾದ ವಿಮಾನಗಳಲ್ಲಿ ಸಾಗಾಟ ಮಾಡಲಾಗುತ್ತಿತ್ತು. ಹಾಗಾಗಿ ಅದು ಯಾರ ಗಮನಕ್ಕೂ ಬರುತ್ತಿರಲಿಲ್ಲ. ಆದರೆ, ಕೋವಿಡ್-19 ನಿರ್ಬಂಧದ ಹಿನ್ನೆಲೆಯಲ್ಲಿ ಬಾಡಿಗೆ ವಿಮಾನಗಳಲ್ಲಿ ಅವನ್ನು ಸಾಗಿಸಲಾಗುತ್ತಿತ್ತು. ಹಾಗಾಗಿ ಇದು ತನಿಖಾ ಸಂಸ್ಥೆಯ ಗಮನಸೆಳೆಯಿತು ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನಿನಲ್ಲಿ ಶನಿವಾರ ರಾತ್ರಿ ಬಂಧಿತರಾಗಿರುವ ಕೇರಳದ ಐಟಿ ಇಲಾಖೆಯ ಅಧಿಕಾರಿ ಹಾಗೂ ಯುಎಇ ರಾಯಭಾರ ಕಚೇರಿಯ ಮಾಜಿ ಉದ್ಯೋಗಿ ಸ್ವಪ್ನಾ ಸುರೇಶ್ ಸೇರಿ ನಾಲ್ವರ ವಿರುದ್ಧ ಯುಎಪಿಎ ಕಾಯ್ದೆ ಹಾಗೂ ಭಯೋತ್ಪಾದನಾ ಕಾಯ್ದೆಯಡಿ, ಹಿಂಸಾ ಕೃತ್ಯಗಳ ಸಂಚು ರೂಪಿಸಿ, ಅವನ್ನು ಸಾಕಾರಗೊಳಿಸಲು ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದಲ್ಲದೆ, ತನ್ಮೂಲಕ ರಾಷ್ಟ್ರದ ಆರ್ಥಿಕ ಭದ್ರತೆ ಮತ್ತು ಹಣಕಾಸು ಸ್ಥಿರತೆಗೆ ಧಕ್ಕೆಯನ್ನುಂಟು ಮಾಡುವ ಆರೋಪಗಳನ್ನೂ ಎಫ್ಐಆರ್ನಲ್ಲಿ ಹೊರಿಸಲಾಗಿದೆ.
https://www.vijayavani.net/rgvs-corona-virus-movie-heroine-dakkshi-guttikonda/