ಶ್ರೀನಗರ: ಜಮ್ಮುಕಾಶ್ಮೀರ ಕ್ರಮೇಣವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಆಗಸ್ಟ್ 5ರಂದು ಕಾಶ್ಮೀರದ ಆರ್ಟಿಕಲ್ 370ನ್ನು ರದ್ದುಗೊಳಿಸಿದ ಬಳಿಕ ಅಲ್ಲಿ ಕಟ್ಟುನಿಟ್ಟಿನ ಬಂದೋಬಸ್ತ್ ಮಾಡಲಾಗಿತ್ತು. ಮಾಜಿ ಮುಖ್ಯಮಂತ್ರಿಗಳು ಸೇರಿ ಪ್ರಮುಖ ರಾಜಕೀಯ ಮುಖಂಡರನ್ನು ಗೃಹಬಂಧನದಲ್ಲಿ ಇಟ್ಟು, ಅವರು ಪೊಲೀಸ್ ಕಣ್ಗಾವಲಿನಲ್ಲಿಯೇ ಇದ್ದರು. ಇಂಟರ್ನೆಟ್, ಮೊಬೈಲ್ ಸೇವೆಗಳೂ ಸ್ಥಗಿತಗೊಂಡಿದ್ದವು. ಯಾವುದೇ ಅಹಿತಕರ ಘಟನೆಗಳು ನಡೆಯದಿರಲಿ ಎಂದು ಈ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಈಗ ಕ್ರಮೇಣ ಅಲ್ಲಿನ ವಾತಾವರಣ ಸಹಜ ಸ್ಥಿತಿಗೆ ಬರುತ್ತಿದ್ದು ನಿನ್ನೆಯಷ್ಟೇ ಕೆಲವು ರಾಜಕಾರಣಿಗಳನ್ನು ಬಿಡುಗಡೆ ಮಾಡಲಾಗಿದೆ. ಆದರೆ ಫಾರೂಕ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಮತ್ತು ಒಮರ್ ಅಬ್ದುಲ್ಲಾ ಅವರನ್ನು ಇನ್ನೂ ಬಿಡುಗಡೆ ಮಾಡಿಲ್ಲ.
ಹಾಗೇ ಇಂದು ಜಮ್ಮುಮತ್ತು ಕಾಶ್ಮೀರದಲ್ಲಿ ಮೊಬೈಲ್ ಎಸ್ಎಂಎಸ್ ಸೇವೆಯನ್ನು ಇಂದು ಮಧ್ಯರಾತ್ರಿಯಿಂದ ಮರು ಆರಂಭ ಮಾಡಲು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.
ಹೊಸವರ್ಷದಿಂದ ಕಾಶ್ಮೀರ ಕಣಿವೆಯಲ್ಲಿ ಮೊಬೈಲ್ ಎಸ್ಎಂಎಸ್ ಸೇವೆಯನ್ನು ಮತ್ತೆ ಶುರು ಮಾಡಲಾಗುವುದು ಎಂದು ಜಮ್ಮುಕಾಶ್ಮೀರದ ಪ್ರಧಾನ ಕಾರ್ಯದರ್ಶಿ ರೋಹಿತ್ ಕನ್ಸಾಲ್ ತಿಳಿಸಿದ್ದಾರೆ.
ಕೆಲವೇ ದಿನಗಳ ಹಿಂದೆ ಲಡಾಕ್ ಕೇಂದ್ರಾಡಳಿತ ಪ್ರದೇಶದಲ್ಲಿರುವ ಕಾರ್ಗಿಲ್ ಜಿಲ್ಲೆಯಲ್ಲಿ ಮೊಬೈಲ್ ಎಸ್ಎಂಎಸ್ ಸೇವೆಯನ್ನು ಪ್ರಾರಂಭಿಸಲಾಗಿದೆ.
ಆದರೆ ಕಾಶ್ಮೀರ ಕಣಿವೆಯಲ್ಲಿ ಇಂಟರ್ನೆಟ್ ಸೌಕರ್ಯವನ್ನು ಸದ್ಯಕ್ಕೆ ಪ್ರಾರಂಭ ಮಾಡುವುದಿಲ್ಲ. ಇನ್ನೂ ಕೆಲವು ದಿನಗಳ ಕಾಲ ಸ್ಥಗಿತಗೊಂಡಿರುತ್ತದೆ ಎಂದು ರೋಹಿತ್ ಕನ್ಸಾಲ್ ಹೇಳಿದ್ದಾರೆ.