ಶಿವಮೊಗ್ಗ: ಜಿಲ್ಲೆಯ ಮಹಾನಗರ ಪಾಲಿಕೆ, ನಗರಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ 108 ಸರ್ಕಾರಿ ಘೋಷಿತ ಕೊಳಚೆ ಪ್ರದೇಶಗಳ 18,852 ಕುಟುಂಬಗಳಿಗೆ ಸ್ವಂತ ಸೂರಿನ ಮಾಲೀಕತ್ವ ಹೊಂದಲು ಅನುಕೂಲವಾಗುವಂತೆ ಹಕ್ಕುಪತ್ರ ನೀಡುವ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಈಗಾಗಲೇ ಸಂಪುಟ ಸಭೆಯಲ್ಲಿ ಚರ್ಚಿಸಿದ್ದು ಸೋಮವಾರ ಸರ್ಕಾರ ಆದೇಶ ಹೊರಡಿಸಿದೆ. ಮಹಾನಗರ ಪಾಲಿಕೆ ಮತ್ತು ಇತರ ಸರ್ಕಾರಿ ಇಲಾಖೆಗಳ ಜಮೀನುಗಳಲ್ಲಿರುವ ಈ ಕೊಳಚೆ ಪ್ರದೇಶಗಳ ಜಮೀನನ್ನು ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಒಂದು ತಿಂಗಳೊಳಗೆ ಹಸ್ತಾಂತರಿಸಿ ಶೀಘ್ರ ಹಕ್ಕುಪತ್ರ ನೀಡಲು ಸೂಚನೆ ನೀಡಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಂದಾಯ ಇಲಾಖೆ, ಮಹಾನಗರ ಪಾಲಿಕೆ ಅಥವಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಕೊಳಚ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಿಗೆ ಇದರಿಂದ ಅನುಕೂಲ ಆಗುವ ಜತೆಗೆ ಶಾಶ್ವತ ನೆಲೆ ಸಿಗಲಿದೆ. ಹಕ್ಕುಪತ್ರದ ಜತೆಗೆ ಈ ಹಿಂದೆ ನಿಗದಿಪಡಿಸಿದ್ದ ದರವನ್ನೂ ಕಡಿತಗೊಳಿಸಲಾಗಿದೆ. ಈಗಾಗಲೇ ಕೆಲ ಸ್ಥಳೀಯ ಸಂಸ್ಥೆಗಳು ನೀಡಿರುವ ಯಾವುದೇ ಹಕ್ಕುಪತ್ರಗಳು ಉಪಯೋಗಕ್ಕೆ ಬರುವುದಿಲ್ಲ ಎಂದರು. ಡಿಸಿ ಕೆ.ಬಿ.ಶಿವಕುಮಾರ್ ಹಾಗೂ ಮತ್ತಿತರ ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿದ್ದರು.