ಶಿವಮೊಗ್ಗ: ಕೌಶಲ ಮತ್ತು ಉತ್ತಮ ಜ್ಞಾನದಿಂದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿದೆ ಎಂದು ಎನ್ಇಎಸ್(ರಾಷ್ಟ್ರೀಯ ಶಿಕ್ಷಣ ಸಮಿತಿ) ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ್ ಅಭಿಪ್ರಾಯಪಟ್ಟರು.
ನಗರದ ಜಯಪ್ರಕಾಶ್ ನಾರಾಯಣ್ ಪಿಯುಸಿ ಕಾಲೇಜಿನಲ್ಲಿ ಶುಕ್ರವಾರ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಧೀಮಂತ ನಾಯಕರ ಆದರ್ಶ ಯುವ ಸಮೂಹಕ್ಕೆ ಎಂದಿಗೂ ಪ್ರೇರಣೀಯವಾಗಿದೆ. ಯುವ ಸಮೂಹ ನಾಯಕರ ಆದರ್ಶಗಳನ್ನು ಅರಿತು ದೇಶದ ಸುಭದ್ರತೆಯತ್ತ ಚಿಂತನೆ ನಡೆಸಬೇಕಿದೆ ಎಂದರು.
ಶಿಕ್ಷಣ ನಮ್ಮ ಬದುಕಿನ ಬುನಾದಿ. ಅಂತಹ ಶಿಕ್ಷಣದ ಜತೆಗೆ ನಮ್ಮಲ್ಲಿನ ಸೂಪ್ತ ಪ್ರತಿಭೆಗಳಿಗೆ ಶಾಲಾ-ಕಾಲೇಜುಗಳ ವಿದ್ಯಾರ್ಥಿ ಸಂಘಗಳು ಪ್ರೇರಣೆ ನೀಡುತ್ತಿವೆ. ಕೌಶಲ ಹಾಗೂ ಜ್ಞಾನದಿಂದ ಯಶಸ್ಸು ಸಾಧ್ಯವಿದೆ ಎಂದು ಹೇಳಿದರು.
ಮಾಜಿ ಉಪ ಮೇಯರ್ ಶಂಕರ್ ಗನ್ನಿ ಮಾತನಾಡಿ, ಮಹಾನಗರ ಪಾಲಿಕೆಯಿಂದ ಪ್ರಸಕ್ತ ಸಾಲಿನಲ್ಲಿ 10 ಲಕ್ಷ ರೂ. ಅನುದಾನದಲ್ಲಿ ಕಾಲೇಜಿನ ಅಭಿವೃದ್ಧಿಗೆ ಅವಶ್ಯಕ ವಿವಿಧ ಕಾಮಗಾರಿ ನಡೆಸಲಾಗುವುದು ಎಂದು ಹೇಳಿದರು.
ನಿವೃತ್ತ ಉಪನ್ಯಾಸಕ ಬಿ.ಕೆ.ವೆಂಕಟೇಶಮೂರ್ತಿ ಮಾತನಾಡಿದರು. ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎನ್ಇಎಸ್ನಿಂದ ವಿದ್ಯಾರ್ಥಿ ವೇತನದ ಚೆಕ್ ವಿತರಿಸಲಾಯಿತು. ಪ್ರಾಚಾರ್ಯ ಕೆ.ಕೆಂಚಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕ ದಯಾನಂದ ನಾಯ್ಕ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಸೌಂದರ್ಯಾ ಇದ್ದರು.