ಚನ್ನಪಟ್ಟಣ: ತಾಲೂಕಿನಲ್ಲಿ ಕಾಡುಪ್ರಾಣಿಗಳ ಉಪಟಳ ಮಿತಿಮೀರಿದೆ. ಒಂದೆಡೆ ಕಾಡಾನೆಗಳು, ಮತ್ತೊಂದೆಡೆ ಚಿರತೆಗಳ ಕಾಟದಿಂದ ಜನತೆ ಹೈರಾಣಾಗಿದ್ದಾರೆ.
ತಾಲೂಕಿನ ಕೂಡ್ಲೂರು ಗ್ರಾಮದ ಬಳಿಯ ಕಣ್ವ ನದಿಯಲ್ಲಿ ಶನಿವಾರ ಆರು ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದೆ. ಶುಕ್ರವಾರ ರಾತ್ರಿ ಈ ಭಾಗದ ಹಲವು ಜಮೀನುಗಳ ಮೇಲೆ ಆನೆಗಳ ಗುಂಪು ದಾಳಿ ನಡೆಸಿವೆ.
ತೆಂಗಿನಕಲ್ಲು ಅರಣ್ಯ ಪ್ರದೇಶದಿಂದ ಆಹಾರ ಅರಸಿ, ಗ್ರಾಮದ ಕೃಷಿ ಜಮೀನಿಗೆ ಲಗ್ಗೆ ಇಟ್ಟಿರುವ ಈ ಕಾಡಾನೆಗಳು ಮತ್ತೆ ಅರಣ್ಯಕ್ಕೆ ಹೋಗದೆ ಕೂಡ್ಲೂರು ಗ್ರಾಮದ ಕಣ್ವ ನದಿಯಲ್ಲೇ ಬೀಡುಬಿಟ್ಟಿವೆ. ಜಲ ಕ್ರೀಡೆಯಲ್ಲಿ ತೊಡಗಿರುವ ಈ ಆನೆಗಳನ್ನು ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಮುಂಜಾನೆಯೇ ಸ್ಥಳದಲ್ಲಿ ಜಮಾಯಿಸಿದ್ದರು.
ಹಗಲಿನಲ್ಲಿ ಜನದಟ್ಟಣೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಾಡಾನೆಗಳು ನದಿಯಲ್ಲಿ ಬಿಡು ಬಿಟ್ಟಿದ್ದು, ರಾತ್ರಿ ಮತ್ತೆ ರೈತರ ಜಮೀನಿನ ದಾಳಿ ಮಾಡುವ ಸಾಧ್ಯತೆ ಇದೆ. ನದಿಯಲ್ಲಿ ಬಿಡು ಬಿಟ್ಟಿರುವ ಆನೆಗಳನ್ನು ಶನಿವಾರ ರಾತ್ರಿ ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗಟ್ಟುವ ಕಾರ್ಯಾಚರಣೆ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.