More

    ಎಬಿ ಡಿವಿಲಿಯರ್ಸ್‌ ಹಿಂಬಡ್ತಿಗೆ ಕಾರಣ ವಿವರಿಸಿದ ವಿರಾಟ್ ಕೊಹ್ಲಿ

    ಶಾರ್ಜಾ: ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್‌ ಸ್ಫೋಟಕ ಆಟವಾಡುವ ಮೂಲಕ ಚಿತ್ರಣವನ್ನೇ ಬದಲಾಯಿಸಿದ್ದರು. ಆದರೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಅವರಿಗೆ ಹಿಂಬಡ್ತಿ ನೀಡುವ ಮೂಲಕ ಆರ್‌ಸಿಬಿ ತಂಡ ಎಡವಟ್ಟು ಮಾಡಿಕೊಂಡಿತ್ತು. ಇದರಿಂದ ನಿರೀಕ್ಷಿತ ಮೊತ್ತ ಕೂಡಿಹಾಕಲು ಸಾಧ್ಯವಾಗದೆ ಆರ್‌ಸಿಬಿ 8 ವಿಕೆಟ್‌ಗಳಿಂದ ಶರಣಾಯಿತು. ಎಬಿಡಿಗೆ ಹಿಂಬಡ್ತಿ ನೀಡಿದ ಬಗ್ಗೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಪಂದ್ಯದ ಬಳಿಕ ಕಾರಣ ವಿವರಿಸಿದರು.

    ಪಂಜಾಬ್ ತಂಡದಲ್ಲಿ ಇಬ್ಬರು ಲೆಗ್ ಸ್ಪಿನ್ನರ್‌ಗಳಿದ್ದರು. ಹೀಗಾಗಿ ಎಡಗೈ-ಬಲಗೈ ಜೋಡಿ ಕ್ರೀಸ್‌ನಲ್ಲಿರಬೇಕೆಂಬ ಕಾರಣಕ್ಕಾಗಿ ಎಡಗೈ ಬ್ಯಾಟ್ಸ್‌ಮನ್‌ಗಳಾದ ವಾಷಿಂಗ್ಟನ್ ಸುಂದರ್ ಮತ್ತು ಶಿವಂ ದುಬೆ ಅವರಿಗೆ ಬಡ್ತಿ ನೀಡಲಾಯಿತು. ಇದರಿಂದ ಎಬಿಡಿ ಎಂದಿನ 4ನೇ ಕ್ರಮಾಂಕಕ್ಕೆ ಬದಲಾಗಿ 6ನೇ ಕ್ರಮಾಂಕದಲ್ಲಿ ಆಡಬೇಕಾಯಿತು. ಆದರೆ ಕೆಲವೊಮ್ಮೆ ನಮ್ಮ ಕಾರ್ಯತಂತ್ರಗಳು ವಿಫಲವಾಗುತ್ತವೆ. ನಮ್ಮ ನಿರ್ಧಾರ ಸರಿಯಾಗಿಯೇ ಇತ್ತು. ಆದರೆ ಅದು ಫಲಿಸಲಿಲ್ಲ ಎಂದು ಕೊಹ್ಲಿ ವಿವರಿಸಿದರು.

    ಆರ್‌ಸಿಬಿ ತಂಡದ 172 ರನ್ ಸವಾಲಿಗೆ ಪ್ರತಿಯಾಗಿ ಕಿಂಗ್ಸ್ ಇಲೆವೆನ್ ಪಂಜಾಬ್‌ಗೆ ಕನ್ನಡಿಗರಾದ ಮಯಾಂಕ್ ಅಗರ್ವಾಲ್ (45) ಮತ್ತು ನಾಯಕ ಕೆಎಲ್ ರಾಹುಲ್ (61) ಜೋಡಿ ಉತ್ತಮ ಆರಂಭ ಒದಗಿಸಿತು. ಬಳಿಕ, ಟೂರ್ನಿಯಲ್ಲಿ ಮೊದಲ ಪಂದ್ಯವಾಡಿದ ಕ್ರಿಸ್ ಗೇಲ್ (53) ಕೂಡ ರಾಹುಲ್‌ಗೆ ಉತ್ತಮ ಸಾಥ್ ನೀಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಆದರೆ ಚಾಹಲ್ ಎಸೆದ ಕೊನೇ ಓವರ್‌ನ 5ನೇ ಎಸೆತದಲ್ಲಿ ಗೇಲ್ ರನೌಟಾದರು. ಇದರಿಂದ ಕೊನೇ ಎಸೆತದಲ್ಲಿ 1 ರನ್ ಬೇಕಾಗಿದ್ದಾಗ ನಿಕೋಲಸ್ ಪೂರನ್ ಸಿಕ್ಸರ್ ಸಿಡಿಸಿ ಗೆಲುವು ತಂದರು.

    171 ರನ್ ರಕ್ಷಿಸಿಕೊಳ್ಳುವ ವಿಶ್ವಾಸವಿತ್ತು. ಆದರೆ ಬೌಲಿಂಗ್‌ನಲ್ಲೂ ನಮ್ಮ ಕೆಲವು ತಂತ್ರಗಳು ಫಲಿಸಲಿಲ್ಲ ಎಂದು ಕೊಹ್ಲಿ ಹೇಳಿದರು. ಸದಾ ಪವರ್‌ಪ್ಲೇಯಲ್ಲಿ ನಿಯಂತ್ರಿತ ಬೌಲಿಂಗ್ ನಡೆಸುತ್ತಿದ್ದ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಈ ಬಾರಿ ತಡವಾಗಿ ದಾಳಿಗಿಳಿದರು. ವಾಷಿಂಗ್ಟನ್ ಅವರನ್ನು ಬಳಸಿ ವನ್‌ಡೌನ್‌ನಲ್ಲಿ ಬ್ಯಾಟಿಂಗ್‌ಗೆ ಬರುವ ಕ್ರಿಸ್ ಗೇಲ್‌ರನ್ನು ಕಟ್ಟಿಹಾಕುವುದಾಗಿತ್ತು ಯೋಜನೆಯಾಗಿತ್ತು. ಆದರೆ ಗೇಲ್, ವಾಷಿಂಗ್ಟನ್ ಎಸೆತದಲ್ಲಿ 4 ಸಿಕ್ಸರ್ ಸಿಡಿಸಿ ಈ ಯೋಜನೆಯನ್ನು ವಿಫಲವಾಗಿಸಿದರು.

    ನಿಕೋಲಸ್ ಪೂರನ್ ಐಪಿಎಲ್‌ನಲ್ಲಿ ಕೊನೇ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಗೆಲುವು ತಂದ 7ನೇ ಬ್ಯಾಟ್ಸ್‌ಮನ್ ಎನಿಸಿದರು. ರೋಹಿತ್ ಶರ್ಮ ಈ ಸಾಧನೆಯನ್ನು 3 ಬಾರಿ ಮಾಡಿದ್ದಾರೆ. ಕೆಎಲ್ ರಾಹುಲ್ ಹಾಲಿ ಟೂರ್ನಿಯಲ್ಲಿ ಆರ್‌ಸಿಬಿ ವಿರುದ್ಧದ 2 ಪಂದ್ಯಗಳಲ್ಲಿ 193 ರನ್ ಬಾರಿಸಿದ್ದು, ಒಮ್ಮೆಯೂ ಔಟಾಗಿಲ್ಲ! ಯಜುವೇಂದ್ರ ಚಾಹಲ್ ಟಿ20 ಕ್ರಿಕೆಟ್‌ನಲ್ಲಿ 200 ವಿಕೆಟ್ ಕಬಳಿಸಿದ 5ನೇ ಭಾರತೀಯ ಬೌಲರ್ ಎನಿಸಿದರು.

    ನಮ್ಮ ತಂಡ ಅಂಕಪಟ್ಟಿಯಲ್ಲಿ ಕೆಳಗಿನ ಸ್ಥಾನದಲ್ಲಿರುವಷ್ಟು ಕೆಟ್ಟದಾಗಿಲ್ಲ. ಆದರೆ ಟೂರ್ನಿಯ ಕೆಲ ನಿಕಟ ಪಂದ್ಯಗಳಲ್ಲಿ ನಾವು ಎಡವಿದೆವು. ಇದು ಐಪಿಎಲ್ ಮತ್ತು ಕ್ರಿಕೆಟ್ ಆಟದ ಅಂಗ. ಈ ಗೆಲುವಿನಿಂದ ತಂಡದಲ್ಲಿ ಮತ್ತೆ ಸಕಾರಾತ್ಮಕ ಬಲ ಬಂದಿದೆ ಎಂದು ಕಿಂಗ್ಸ್ ಇಲೆವೆನ್ ನಾಯಕ ಹಾಗೂ ಪಂದ್ಯಶ್ರೇಷ್ಠ ಕೆಎಲ್ ರಾಹುಲ್ ಹೇಳಿದರು.

    ಕೆಕೆಆರ್​ ತಂಡದಲ್ಲಿ ಮಹತ್ವದ ಬದಲಾವಣೆ; ಇನ್ಮುಂದೆ ದಿನೇಶ್ ಕಾರ್ತೀಕ್ ನಾಯಕನಲ್ಲ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts