ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಬರೋಬ್ಬರಿ ಎರಡೂವರೆ ತಾಸುಗಳ ಸುದೀರ್ಘ ಬಜೆಟ್ ಭಾಷಣ ಮಾಡಿ ದಾಖಲೆ ನಿರ್ಮಿಸಿದರು.
ಕಾಶ್ಮೀರಿ ಪದ್ಯಗಳು, ತಮಿಳು ಕವಿಗಳ ಕೋಟ್ಗಳು, ಸರಸ್ವತಿ-ಸಿಂಧು ನಾಗರೀಕತೆಗಳನ್ನು ಬಜೆಟ್ ಮಂಡನೆಯ ಭಾಷಣದಲ್ಲಿ ಉಲ್ಲೇಖ ಮಾಡಿದ್ದ ವಿಶೇಷವಾಗಿತ್ತು. ಅಷ್ಟು ಸುದೀರ್ಘವಾಗಿ ಬಜೆಟ್ ಮಂಡನೆ ಮಾಡಿದರೂ ಇನ್ನೂ ಎರಡು ಪೇಜ್ಗಳಷ್ಟನ್ನು ಓದುವುದು ಬಾಕಿ ಇತ್ತು. ಆದರೆ ನಿರ್ಮಲಾ ಸೀತಾರಾಮನ್ ಸ್ವಲ್ಪ ಅಸ್ವಸ್ಥರಾದಂತೆ ಕಂಡುಬಂದರು. ಹಾಗಾಗಿ ಮಧ್ಯದಲ್ಲಿಯೇ ಮುಗಿಸಿದರು.
ನಿರ್ಮಲಾ ಸೀತಾರಾಮನ್ ಕಾಶ್ಮೀರಿ, ಹಿಂದಿ ಪದ್ಯಗಳೊಂದಿಗೆ ತಿರುವಲ್ಲುವರ್ ಮತ್ತು ಕವಿ ಕಾಳಿದಾಸನ ಕವಿತೆಗಳನ್ನೂ ಹೇಳಿದರು.
ನಿರ್ಮಲಾ ಸೀತಾರಾಮನ್ ಕಳೆದ ಬಾರಿ ತಮ್ಮ ಮೊದಲ ಬಜೆಟ್ನ್ನು ಮಂಡಿಸಲು 137 ನಿಮಿಷಗಳ ಅವಧಿಯನ್ನು ತೆಗೆದುಕೊಂಡಿದ್ದರು. ಅದೇ ಸುದೀರ್ಘ ಬಜೆಟ್ ಮಂಡನೆಯಾಗಿತ್ತು. ಈಗ ಅವರದ್ದೇ ದಾಖಲೆಯನ್ನು ಅವರೇ ಮುರಿದು 160 ನಿಮಿಷ ಬಜೆಟ್ ಓದಿದ್ದಾರೆ.
ಬಜೆಟ್ ಭಾಷಣದಲ್ಲಿ ಕೇಂದ್ರ ಸರ್ಕಾರದ ಸಾಧನೆಗಳಲ್ಲಿ ಕೆಲವನ್ನು ಪಟ್ಟಿ ಮಾಡಿ ಹೇಳಿದರು. ಆದರೆ ಈ ವೇಳೆ ಪ್ರತಿಪಕ್ಷಗಳು ವಿರೋಧ ಕೂಡ ವ್ಯಕ್ತಪಡಿಸಿದವು.
ಇಂದು ವೈಯಕ್ತಿಕ ಆದಾಯ ತೆರಿಗೆದಾರರ ತೆರಿಗೆ ಪಾವತಿಯ ಪ್ರಮಾಣವನ್ನು ಕಡಿತ ಮಾಡಿದ್ದನ್ನು ಎಲ್ಲ ಪಕ್ಷಗಳೂ ಬೆಂಚ್ಗಳನ್ನು ಬಡಿದು ಸ್ವಾಗತಿಸಿದರು. ಈ ವೇಳೆ ನರೇಂದ್ರ ಮೋದಿಯವರೂ ಉಳಿದವರ ಜತೆ ಸೇರಿಕೊಂಡರು.
150 ನಿಮಿಷಗಳ ಕಾಲ ಬಜೆಟ್ ಓದಿದ ನಿರ್ಮಲಾ ಸೀತಾರಾಮನ್ ಅಸ್ವಸ್ಥರಾದಂತೆ ಕಂಡು ಬಂದಾಗ ಅವರಿಗೆ ನೀರು ನೀಡಲಾಯಿತು. ಅಲ್ಲಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಒಂದು ಚಾಕಲೇಟ್ನ್ನೂ ಕೊಟ್ಟರು. ಅದಾದ ಮೇಲೆ ಕೂಡ ಸ್ವಲ್ಪ ಹೊತ್ತು ಭಾಷಣ ಮುಂದುವರಿಸಿದರು. ಆದರೆ ಕೊನೆಗೆ ಆಗದೆ ಹೋದಾಗ ಅನಿವಾರ್ಯವಾಗಿ ಭಾಷಣವನ್ನು ಮುಕ್ತಾಯಗೊಳಿಸಿದರು.
ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ಅಮಿತ್ ಷಾ ಕೂಡ ನಿರ್ಮಲಾ ಸೀತಾರಾಮನ್ ಜತೆ ಮಾತನಾಡಿದರು. ಬಜೆಟ್ ಓದಲು ತನಗೆ ಸಾಧ್ಯವಾಗುತ್ತಿಲ್ಲ ಎಂದು ನಿರ್ಮಲಾ ಸೀತಾರಾಮನ್ ಸ್ಪೀಕರ್ಗೆ ಮನವಿ ಮಾಡಿಕೊಂಡರು. ಕೂಡಲೇ ಲೋಕಸಭೆಯನ್ನು ಮುಂದೂಡಲಾಯಿತು.
ಪ್ರಧಾನಿ ನರೇಂದ್ರ ಮೋದಿ ಎದ್ದು ಬಂದು ನಿರ್ಮಲಾ ಸೀತಾರಾಮನ್ಗೆ ಶುಭ ಕೋರಿದರು. ಪಿಯುಷ್ ಗೋಯೆಲ್, ಸ್ಮೃತಿ ಇರಾನಿ ಸೇರಿ ಹಲವು ಸಚಿವರು, ಕಾಂಗ್ರೆಸ್ ಸಂಸದರು ಆಗಮಿಸಿ ನಿರ್ಮಲಾ ಸೀತಾರಾಮನ್ ಆರೋಗ್ಯದ ಬಗ್ಗೆ ವಿಚಾರಿಸಿದರು. (ಪಿಟಿಐ)