ಶಿರಸಿ: ಮಾರಿಕಾಂಬಾ ದೇವಿ ಜಾತ್ರೆಗೆ ಈಗ ಭಕ್ತರು ಸಾಲು ಸಾಲಾಗಿ ಆಗಮಿಸತೊಡಗಿದ್ದಾರೆ. ಜಾತ್ರಾ ಗದ್ದುಗೆಯಲ್ಲಿ ಆಸೀನಳಾದ ಸರ್ವಾಭರಣ ಭೂಷಿತ ದೇವಿಯನ್ನು ಹತ್ತಿರದಿಂದ ಕಂಡು ಪುಳಕಿತರಾಗುತ್ತಿದ್ದಾರೆ.
ಮಾರಿಕಾಂಬಾ ದೇವಿಯ ದರ್ಶನ ಗುರುವಾರ ಬೆಳಗಿನಿಂದ ಆರಂಭಗೊಂಡಿದೆ. ನಾಡಿಗ ಕುಟುಂಬದಿಂದ ಜಾತ್ರಾ ಗದ್ದುಗೆ ಆಸೀನಳಾದ ದೇವಿಗೆ ಗುರುವಾರ ಬೆಳಗ್ಗೆ ಮೊದಲ ಪೂಜೆ, ಮಹಾ ಮಂಗಳಾರತಿ ನೆರವೇರಿತು. ಅಜಯ ನಾಡಿಗ ದಂಪತಿ ಪೂಜಾ ಕಾರ್ಯ ನೆರವೇರಿಸಿದರು. ಆ ಬಳಿಕ ಸರತಿ ಸಾಲಿನಲ್ಲಿ ನಿಂತ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಜಾತ್ರೆ ಆರಂಭದ ಮೊದಲ ಮೂರು ದಿನಗಳ ಕಾಲ ದಕ್ಷಿಣ ಕನ್ನಡ, ಕುಂದಾಪುರ, ಉಡುಪಿ ಭಾಗದ ಭಕ್ತರ ಸಂಖ್ಯೆ ಜಾಸ್ತಿ ಇರುತ್ತದೆ. ಹೀಗಾಗಿ ಕರಾವಳಿ ಭಾಗದಿಂದ ಬರುವ ಬಸ್ಗಳು ಕಿಕ್ಕಿರಿದು ಬರುತ್ತಿದ್ದವು.
ಮಾರಿಕಾಂಬಾ ದೇವಿಯ ದರ್ಶನಕ್ಕೆ ಬರುವವರಿಗೆ ಸರತಿ ಸಾಲಿನಲ್ಲಿ ನಿಲ್ಲಲು ನೆರಳಿನ ವ್ಯವಸ್ಥೆಯನ್ನು ದೇವಾಲಯದ ವತಿಯಿಂದ ಮಾಡಲಾಗಿದೆ. ಸಾಲಿನಲ್ಲಿ ನಿಂತ ಮಹಿಳೆ, ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.
ಶಾಸಕ ಭೀಮಣ್ಣ ಕುಟುಂಬದಿಂದ ದೇವಿ ದರ್ಶನ
ಜಾತ್ರೆಯ ಮೊದಲ ದಿನವೇ ಶಾಸಕ ಭೀಮಣ್ಣ ನಾಯ್ಕ ಕುಟುಂಬ ಸಮೇತವಾಗಿ ಆಗಮಿಸಿ ಮಾರಿಕಾಂಬಾ ದೇವಿಯ ದರ್ಶನ ಪಡೆದರು. ಬಳಿಕ ಭೀಮಣ್ಣ ನಾಯ್ಕ ಅಕ್ಕಿ ಮತ್ತು ಅಡಕೆಯಿಂದ ತುಲಾ ಭಾರ ಮಾಡಿದರು. ಈ ವೇಳೆ ಅವರ ಪುತ್ರ ಅಶ್ವಿನ್ ನಾಯ್ಕ ಹಾಗೂ ಕುಟುಂಬದವರಿದ್ದರು.
ಇದನ್ನೂ ಓದಿ: ಚೆಕ್ ಪೋಸ್ಟ್ನಲ್ಲಿ ಕಂಟೇನರ್ ಹೌಸ್ ನೆರಳು