ಸಿರಗುಪ್ಪ: ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತ ಬಸ್ಪಾಸ್ ವಿತರಿಸುವಂತೆ ಒತ್ತಾಯಿಸಿ ಎಐಡಿಎಸ್ಒ ತಾಲೂಕು ಘಟಕ, ವಿದ್ಯಾರ್ಥಿಗಳೊಂದಿಗೆ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿತು.
ವಿದ್ಯಾರ್ಥಿನಿ ಅನುಪಮಾ ಮಾತನಾಡಿ, ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದು, ಗ್ರಾಮಾಂತರ ಪ್ರದೇಶಗಳಿಂದ ಶಾಲಾ-ಕಾಲೇಜಿಗೆ ಬರಬೇಕಾದರೆ ಬಸ್ ಟಿಕೆಟ್ ಪಡೆಯಬೇಕಿದ್ದು, ಆರ್ಥಿಕ ಹೊರೆಯಾಗಿದೆ. ಕಳೆದ ಒಂದೂವರೆ ವರ್ಷದಲ್ಲಿ ಕೋವಿಡ್ ಸಂಕಷ್ಟದಿಂದ ಜನಸಾಮಾನ್ಯರು ನಲುಗಿಹೋಗಿದ್ದಾರೆ. ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಬಸ್ಪಾಸ್ ವಿತರಿಸಿ ಅನುಕೂಲ ಕಲ್ಪಿಸಬೇಕೆಂದು ಮನವಿ ಮಾಡಿದರು. ಕರೊನಾ ಕಾರಣ ಕಳೆದ ವರ್ಷ ವಿದ್ಯಾರ್ಥಿಗಳು ಪಡೆದಿದ್ದ ವಾರ್ಷಿಕ ಬಸ್ಪಾಸ್ ಸಂಪೂರ್ಣವಾಗಿ ಉಪಯೋಗವಾಗಿಲ್ಲ. ಅಲ್ಲದೆ ಅವುಗಳನ್ನು ಸ್ವೀಕರಿಸಲು ನಿರಾಕರಿಸುವ ನಿರ್ವಾಹಕರು ಟಿಕೆಟ್ ಪಡೆಯುವಂತೆ ಪೀಡಿಸುತ್ತಿದ್ದಾರೆ. ಹೀಗಾಗಿ ಉಚಿತ ಬಸ್ ಪಾಸ್ ನೀಡಬೇಕೆಂದು ಒತ್ತಾಯಿಸಿದರು. ಸಂಘಟನೆಯ ಪದಾಧಿಕಾರಿಗಳಾದ ಗಂಗಾಧರ, ವಿಶ್ವ, ಸತೀಶ, ಶ್ರೀಕಾಂತ, ಗಣೇಶ, ವಿದ್ಯಾರ್ಥಿಗಳಾದ ರಾಜ, ಎರಿಸ್ವಾಮಿ, ರವಿಕುಮಾರ, ದೇವರಾಜ, ಚಂದ್ರ, ಕಿರಣ, ಹುಸೇನಪ್ಪ ಇದ್ದರು.