ಸಿರಿಗೆರೆ: ಮನಸ್ಸಿದ್ದರೆ ಮಾರ್ಗ, ಜೀವನದಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಶಿಕ್ಷಕ ಸುರೇಶ್ ಹೇಳಿದರು.
ಇಲ್ಲಿನ ಬಿ.ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ಗುರುವಾರ ಆಯೋಜಿಸಿದ್ದ ಪಾಲಕರ ಸಭೆಯಲ್ಲಿ ಮಾತನಾಡಿದರು.
ಕೇವಲ ಅಂಕ ಗಳಿಕೆಗಾಗಿ ಓದದೆ ಜ್ಞಾನಾರ್ಜನೆಗೆ ಕಲಿಯುವಂತಾಗಬೇಕು. ವಿದ್ಯಾರ್ಥಿಗಳು ತಪಸ್ಸಿನಂತೆ ಓದಬೇಕು. ಹಕ್ಕಿ ಪಕ್ಷಿಗಳು ಹೇಗೆ ಶ್ರದ್ಧೆಯಿಂದ ಗೂಡು ಕಟ್ಟುತ್ತವೆಯೋ ಹಾಗೇ ಜೀವನದಲ್ಲಿ ಶಿಸ್ತು, ಶ್ರದ್ಧೆ ಬೆಳೆಸಿಕೊಳ್ಳಬೇಕು ಎಂದರು.
ಶಿಕ್ಷಕ ಬಿ.ಎಸ್.ಮರುಳಸಿದ್ದಯ್ಯ ಮಾತನಾಡಿ, ಸತತ ಅಭ್ಯಾಸ ರೂಢಿಸಿಕೊಂಡು ಬೆಳಗಿನ ಪ್ರಾತಃ ಕಾಲದಲ್ಲಿ ಓದಬೇಕು. ಇದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ ಎಂದರು.
ಉಪ ಪ್ರಾಚಾರ್ಯ ಜೆ.ಡಿ.ಬಸವರಾಜ ಮಾತನಾಡಿದರು. ಶಿಕ್ಷಕರಾದ ಯು.ಚಂದ್ರಪ್ಪ, ಜಿ.ಎಸ್. ಶಿವಕುಮಾರ್, ಎಚ್.ಬಿ.ನಾಗರಾಜಯ್ಯ, ಕೆ.ಎಂ.ರಮೇಶ್, ವಿ.ವಿಜಯಾಚಾರ್, ಟಿ.ಓ.ಭಾಗ್ಯಾ, ಸುಮಾ ಸಣ್ಣಗೌಡರ ಇದ್ದರು.