ಸಿರಿಗೆರೆ: ಆಂಧ್ರಪ್ರದೇಶದಲ್ಲಿ ಸಿಲುಕಿರುವ ರಾಜ್ಯದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನಿತ್ಯ ದಾಸೋಹ ಕಲ್ಪಿಸುವ ಕುರಿತು ತರಳಬಾಳು ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಭರವಸೆ ನೀಡಿದ್ದಾರೆ.
ಬ್ಯಾಂಕಿಂಗ್ ಪರೀಕ್ಷೆ ತರಬೇತಿಗೆ ಹೋಗಿ ಆಂಧ್ರದಲ್ಲಿ ಸಿಲುಕಿದ್ದ ರಾಜ್ಯದ ವಿದ್ಯಾರ್ಥಿಗಳು ನೆರವಿಗಾಗಿ ಮನವಿ ಮಾಡಿದ್ದರು. ಶ್ರೀಗಳ ನಿಕಟ ಸಂಪರ್ಕದಲ್ಲಿದ್ದ ರಾಚಪ್ಪ ಹೇರೂರು ಅವರ ಪುತ್ರ ವಿಜಯ್ ಕುಮಾರ್ ಅವರು ಆಂಧ್ರದ ಹೈಕೋರ್ಟ್ನಲ್ಲಿ ವಕೀಲರಾಗಿದ್ದು, ಅವರ ಮೂಲಕ ವಿದ್ಯಾರ್ಥಿಗಳಿಗೆ ಶ್ರೀಗಳು ನೆರವು ಕಲ್ಪಿಸಿದ್ದಾರೆ.
ಆಂಧ್ರದ ನಂದ್ಯಾಲ ಮತ್ತು ಕರ್ನೂಲ್ ಜಿಲ್ಲೆಯಲ್ಲಿನ ರಾಜ್ಯದ ಕೆಲವು ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧಿಸಿ ಊಟೋಪಚಾರದ ವ್ಯವಸ್ಥೆ ಮಾಡುತ್ತಿದ್ದಾರೆ. ನಿತ್ಯವೂ ಅಡುಗೆ ತಯಾರಿಸಿ ದೇಗುಲವೊಂದರ ಬಳಿ ತರಲಾಗುತ್ತದೆ. ವಿದ್ಯಾರ್ಥಿಗಳು ಅಲ್ಲಿಗೆ ಬಂದು ಊಟ ಮಾಡಬಹುದು, ಇಲ್ಲವೇ ಪಾರ್ಸಲ್ ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿದೆ ಎಂದು ತರಳಬಾಳು ಶ್ರೀಗಳು ತಿಳಿಸಿದ್ದಾರೆ.
ನಂದ್ಯಾಲ ಕ್ಷೇತ್ರದ ಸಂಸದ ಬ್ರಹ್ಮಾನಂದ ರೆಡ್ಡಿ, ಶಾಸಕರಾದ ಶಿಲ್ಪಾ ರವಿಚಂದ್ರನ್ ರೆಡ್ಡಿ ಅವರು ಸಹ ಅನ್ನದಾನ ಕಾರ್ಯಕ್ರಮದಲ್ಲಿ ಕೈಜೋಡಿಸಿದ್ದಾರೆ ಎಂದು ಶ್ರೀಗಳು ತಿಳಿಸಿದ್ದಾರೆ.