ಸಿರವಾರ: ನನ್ನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಮಾಡುವಷ್ಟು ನಾನು ದೊಡ್ಡವನಲ್ಲ. ಸಾಧನೆ ಮಾಡಿದ ಬಹಳ ಜನರಿದ್ದಾರೆ. ಅವರಿಗೆ ಗೌರವ ಸಲ್ಲಬೇಕು. ನಾನು ಇನ್ನೂ ಚಿಕ್ಕವನು, ಸಾಧನೆ ಮಾಡುವುದು ಬಹಳಷ್ಟು ಇದೆ ಎಂದು ನಟ ಸುದೀಪ್ ಹೇಳಿದರು. ತಾಲೂಕಿನ ಕುರಕುಂದಾ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಮತ್ತು ವೀರ ಮದಕರಿ ನಾಯಕರ ಮೂರ್ತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಜನರ ಅಭಿಮಾನ, ಪ್ರೀತಿ ಎಲ್ಲಕ್ಕಿಂತಲೂ ಮಿಗಿಲು. ನನ್ನ ಮೂತಿ ಪ್ರತಿಷ್ಠಾಪನೆಗೆ ಹೊರಟಿದ್ದ ಅಭಿಮಾನಿಗಳ ಪ್ರೀತಿಗೆ ಎಂದಿಗೂ ಚಿರಋಣಿ. ಮೂರ್ತಿ ನಿರ್ಮಾಣವಾದ ನಂತರ ನನಗೆ ಈ ವಿಷಯ ಗೊತ್ತಾಯಿತ. ಮೊದಲು ಗೊತ್ತಾಗಿದ್ದರೆ ಮೂರ್ತಿ ನಿರ್ಮಾಣ ಮಾಡುವುದನ್ನೇ ಬೇಡ ಅಂತಿದ್ದೆ ಎಂದರು. ನಂತರ ವೀರ ಮದಕರಿ ನಾಯಕ ಚಿತ್ರದ ಡೈಲಾಗ್ ಹೇಳುವ ಮೂಲಕ, ಚಂದು ಸಿಸಿಮಾದ ಹಾಡು ಹಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು.
ಮದಕರಿ ನಾಯಕರ ಮೂರ್ತಿ ನಿರ್ಮಾಣ ಮಾಡಿಸಿದ ತಾಪಂ ದೇವರಾಜ ನಾಯಕ ಮಾತನಾಡಿ, ಅಭಿಮಾನದಿಂದ ಸುದೀಪ್ ಮೂರ್ತಿ ನಿರ್ಮಾಣ ಮಾಡಲಾಗಿತ್ತು. ಅವರು ಬೇಡ ಅಂದ ಕಾರಣಕ್ಕೆ ಮದಕರಿ ನಾಯಕರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ ಎಂದರು. ಮುಖಂಡರಾದ ಶಿವಶರಣಗೌಡ ಲಕ್ಕಂದಿನ್ನಿ, ಜೆ.ದೇವರಾಜ ಪಾಟೀಲ್ ಇದ್ದರು.