ಸಿರಗುಪ್ಪ: ಬಲಕುಂದಿ ಗ್ರಾಮದಲ್ಲಿ ಅಧಿದೇವತೆ ಬನ್ನಿ ಮಹಾಂಕಾಳಿ ದೇವಿ ಜಾತ್ರೆ ಅಂಗವಾಗಿ ಶುಕ್ರವಾರ ಮಹಾ ರಥೋತ್ಸವ ಅದ್ದೂರಿಯಾಗಿ ಜರುಗಿತು.
ದೇವಸ್ಥಾನದಿಂದ ಮಂಗಳ ವಾದ್ಯಗಳೊಂದಿಗೆ ಬನ್ನಿ ಮಹಾಂಕಾಳಿ ದೇವಿ ಉತ್ಸವ ಮೂರ್ತಿ ಹೊತ್ತ ಪಲ್ಲಕ್ಕಿಯೊಂದಿಗೆ ಆಗಮಿಸಿದ ಅರ್ಚಕರು ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಿ ಮಹಾಮಂಗಳಾರತಿ ಮಾಡಿದರು. ನಂತರ ತೇರಿನಲ್ಲಿ ಉತ್ಸವ ಮೂರ್ತಿಯನ್ನು ಇಟ್ಟು ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳೊಂದಿಗೆ ಆಂಧ್ರ ಪ್ರದೇಶ, ಮಹಾರಾಷ್ಟ್ರದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಐದು ವರ್ಷಕ್ಕೊಮ್ಮೆ ನಡೆಯುವ ಮಹಾ ಕುಂಭೋತ್ಸವ ಶನಿವಾರ ಬೆಳಗಿನಜಾವ ಸಂಭ್ರಮದಿಂದ ನಡೆಯಿತು. ಗ್ರಾಮದ ಶ್ರೀಧರಗೌಡರ ಮನೆಯಿಂದ ಮೇಟಿ ಕುಂಭವನ್ನು ಮಂಗಳವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಬನ್ನಿ ಮಹಾಂಕಾಳಿ ದೇವಿಗೆ ಸಮರ್ಪಿಸಲಾಯಿತು.
ನಂತರ ಗ್ರಾಮಸ್ಥರು ಹಾಗೂ ವಿವಿಧ ಗ್ರಾಮಗಳ ಭಕ್ತರು ಕುಂಭದೊಂದಿಗೆ ಗಂಡಾರತಿಯನ್ನು ಹೊತ್ತು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತೆರಳಿ ಕುಂಭವನ್ನು ಸಮರ್ಪಣೆ ಮಾಡಿ ದೇವಿಗೆ ಹೂ, ಹಣ್ಣು, ಕಾಯಿ ಅರ್ಪಿಸಿದರು. 5 ಸಾವಿರಕ್ಕೂ ಹೆಚ್ಚು ಕುಂಭಗಳನ್ನು ಸಮರ್ಪಿಸಲಾಯಿತು.