ಸಿಂಧನೂರು: ಸಿಂಧನೂರು ಕ್ಷೇತ್ರದಿಂದ ನಾನು ಕೂಡ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದೆ, ಆದರೆ, ಯುವಕ ಕೆ.ಕರಿಯಪ್ಪಗೆ ಟಿಕೆಟ್ ನೀಡಿರುವುದನ್ನು ಸ್ವಾಗತಿಸುವೆ ಎಂದು ಕೆಪೆಕ್ ಅಧ್ಯಕ್ಷ ಹಾಗೂ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದಲಾವಣೆ ತರುವ ದೃಷ್ಟಿಯಿಂದ ಬಿಜೆಪಿಯಲ್ಲಿ ಈ ಬಾರಿ ಹೆಚ್ಚಿನ ಯುವಕರಿಗೆ ಟಿಕೆಟ್ ಹಂಚಿಕೆ ಮಾಡಲಾಗಿದೆ. ಅದರಲ್ಲೂ ಹಿಂದುಳಿದ ಕುರುಬ ಸಮುದಾಯಕ್ಕೆ ಸೇರಿದ ನನ್ನ ಪುತ್ರ ಕೆ.ಕರಿಯಪ್ಪಗೆ ಟಿಕೆಟ್ ನೀಡಿರುವುದು ಸಂತಸ ತಂದಿದೆ ಎಂದರು.
ನಾನು ಇಲ್ಲವೇ ನನ್ನ ಮಗಳಿಗೆ ಟಿಕೆಟ್ ಕೊಡಿ ಎಂದು ಪಕ್ಷದ ವರಿಷ್ಠರಲ್ಲಿ ಕೇಳಿದ್ದೆ. ಕೆ.ಕರಿಯಪ್ಪ ಪಕ್ಷ ಸೇರ್ಪಡೆಗೊಂಡ ನಂತರ ವರಿಷ್ಠರನ್ನು ಭೇಟಿಯಾಗಿ ಟಿಕೆಟ್ ಪಡೆದಿದ್ದಾರೆ. ಇಲ್ಲಿ ಯಾವುದೇ ಅಸಮಧಾನವಿಲ್ಲ. ನಮ್ಮ ಮನೆತನದವರಿಗೆ ಟಿಕೆಟ್ ಟಿಕ್ಕಿದೆ. ಈಗಾಗಲೇ ನಿರ್ಧರಿಸಿದಂತೆ ಎಲ್ಲ ಆಕಾಂಕ್ಷಿಗಳು ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತೇವೆ ಎಂದರು.