ಸಿಂಧನೂರು: ಜಾಗತಿಕ ಹೂಡಿಕೆದಾರರ ಸಭೆ ಹಾಗೂ ರೈತ ವಿರೋಧಿ ಕಾಯ್ದೆಗಳ ರದ್ದು ಮಾಡುವುದು, ರೈತರ ಭೂಮಿ ಆಹಾರ ಉದ್ಯೋಗ ಹಕ್ಕುಗಳನ್ನು ರಕ್ಷಿಸಲು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕು ಘಟಕ ಬುಧವಾರ ಪ್ರವಾಸಿ ಮಂದಿರದಿಂದ ತಾಲೂಕು ಆಡಳಿತ ಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿತು.
ಸಂಘದ ಸಂಚಾಲಕ ಬಸವಂತರಾಯಗೌಡ ಕಲ್ಲೂರು ಮಾತನಾಡಿ, ರಾಜ್ಯ ಸರ್ಕಾರ ರೈತರ ಭೂಮಿ, ವಿದ್ಯುತ್, ನೀರು ಮತ್ತಿತರ ಅಮೂಲ್ಯ ಆಸ್ತಿಗಳನ್ನು ಕಾರ್ಪೋರೇಟ್ ಕಂಪನಿಗಳಿಗೆ ಧಾರೆ ಎರೆಯಲು ಜಾಗತಿಕ ಬಂಡವಾಳ ಹೂಡಿಕೆದಾರರ ಸಭೆಯನ್ನು ನ.2ರಿಂದ 4 ರವರೆಗೆ ಬೆಂಗಳೂರಿನ ಹೊರವಲಯದಲ್ಲಿ ನಡೆಸುತ್ತಿದೆ. ಇದೊಂದು ರೈತ ವಿರೋಧಿ ಮತ್ತು ಜನವಿರೋಧಿ ಕ್ರಮ. ಆದ್ದರಿಂದ ಈ ಸಭೆಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.