ಸಿಂಧನೂರು: ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದುವ ಜತೆಗೆ ಪ್ರಭುತ್ವದ ವೈಫಲ್ಯಕ್ಕೆ ಸಂಬಂಧಿಸಿದ ಕತೆಗಳನ್ನು ರಚಿಸುವುದು ಅಗತ್ಯವಾಗಿದೆ ಎಂದು ಸಾಹಿತಿ ಅಮರೇಶ ಗಿಣಿವಾರ ಹೇಳಿದರು.
ನಗರದ ಸರ್ಕಾರಿ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗದಿಂದ ಆಯೋಜಿಸಿದ್ದ ಉಪನ್ಯಾಸ ಹಾಗೂ ಕತೆಗಾರರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಧ್ಯಯನವಿಲ್ಲದೆ ಕತೆ, ಕವ, ಸಾಹಿತ್ಯ ರಚಿಸುವುದು ಅಷ್ಟು ಸುಲಭವಲ್ಲ. ಓದಿನ ಹಸಿವು ಇರುವವರಿಂದ ಹೊಸತನದ ಸಾಹಿತ್ಯ ರಚನೆ ಸಾಧ್ಯವಿದೆ. ಹೀಗಾಗಿ ಬರಹಗಾರರ ದೃಷ್ಟಿಕೋನ ವಿಶಾಲವಾಗಿರಬೇಕು. ಸಾಹಿತ್ಯ ಮತ್ತು ಕತೆ ರಚನೆಯಲ್ಲಿ ಪದಗಳ ಬಳಸುವಿಕೆಯಲ್ಲಿ ನೈಜತೆ ಇರಬೇಕೆಂದರು.
ಪ್ರಾಚಾರ್ಯ ಡಾ.ಸಿ.ಬಿ.ಚಿಲ್ಕರಾಗಿ ಅಧ್ಯಕ್ಷತೆ ವಹಿಸಿದ್ದರು. ಶಂಕರ ಗುರಿಕಾರ ತಂಡದವರು ಬಂಡಾಯ ಗೀತೆ ಹಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಕೆ.ಖಾದರ್ ಬಾಷಾ, ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ.ಸೈಯದ್ ಮುಜೀಬ್, ಉಪನ್ಯಾಸಕರಾದ ಬಸವರಾಜ ಪಿ.ನಾಯಕ, ರಾಮಣ್ಣ ಹಿರೇಬೇರಿಗಿ, ಎರಿಯಪ್ಪ ಬೆಳಗುರ್ಕಿ, ಮಲ್ಲಯ್ಯ ಹಿರೇಮಠ, ಡಾ.ಬಸವರಾಜ ಬಳಿಗಾರ, ಡಾ.ಹುಲಿಗೆಪ್ಪ ಧುಮತಿ, ಡಾ.ಪರಶುರಾಮ ಕಟ್ಟಿಮನಿ ಇದ್ದರು.