ಸಿಂಧನೂರು: ಸ್ಲಂ ಬೋರ್ಡ್ ಸೇರಿ ವಿವಿಧ ವಸತಿ ಯೋಜನೆಗಳ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡುವುದನ್ನು ತಡೆಯುವುದು ಸೇರಿ ಇತರ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಗುರುವಾರ ಕಾರ್ಮಿಕ ನಿರೀಕ್ಷಕ ಕಚೇರಿ ಸಿಬ್ಬಂದಿ ಜೋಕಿಂರಿಗೆ ಮನವಿ ಸಲ್ಲಿಸಿತು.
ಕೊಳಚೆ ನಿರ್ಮೂಲನೆ ಮಂಡಳಿ ಸೇರಿ ಇತರ ವಸತಿ ಯೋಜನೆಗಳ ಫಲಾನುಭವಿಗಳನ್ನು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಗೆ ಫಲಾನುಭವಿಗಳನ್ನಾಗಿ ನೋಂದಾಯಿಸುವ ಕ್ರಮ ಕೈಬಿಡಬೇಕು. ನೋಂದಣಿಯಾದ ಫಲಾನುಭವಿಗಳಲ್ಲಿ ನೈಜ ಕಟ್ಟಡ ಕಾರ್ಮಿಕರಿದ್ದರೆ ಮಾತ್ರ ಪರಿಶೀಲಿಸಿ ಅವರ ಹೆಸರನ್ನು ಕಲ್ಯಾಣ ಮಂಡಳಿಯ ನೋಂದಣಿ ಉಳಿಸಿಕೊಂಡು ಇತರ ಸೌಲಭ್ಯಗಳಿಗೆ ಅವಕಾಶ ಮಾಡಿಕೊಡಬೇಕು. ಈಗಾಗಲೇ ಕೊಳಚೆ ನಿರ್ಮೂಲನೆ ಮಂಡಳಿಗೆ ಪಾವತಿಸಲಾದ 76 ಕೋಟಿ ರೂ. ಕೂಡಲೇ ಮಂಡಳಿ ಖಾತೆಗೆ ವಾಪಸ್ ಪಡೆಯಲು ಅಗತ್ಯ ಕ್ರಮಕೈಗೊಳ್ಳಬೇಕು. ಮಂಡಳಿಯಿಂದ ಈಗಾಗಲೇ ಜಾರಿಯಲ್ಲಿರುವ ಸಿಜಿಎಚ್ ಆಧಾರಿತ ವೈದ್ಯಕೀಯ ಮರುಪಾವತಿ ಯೋಜನೆ ರದ್ದುಮಾಡಿ ಎಲ್ಲಾ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಹಾಗೂ ಕುಟುಂಬದವರಿಗೆ ರಾಜ್ಯ ಸರ್ಕಾರದ ಆರೋಗ್ಯ ಸಂಜೀವಿನಿ 2021 ನಗದುರಹಿತ ಸೇವೆಯನ್ನು ಕೂಡಲೇ ಜಾರಿಗೊಳಿಸಬೇಕು. ಎಸ್ಎಸ್ಪಿ ಪೋರ್ಟಲ್ನಲ್ಲಿ ಸಲ್ಲಿಸಿ ಬಾಕಿ ಇರುವ 60 ಸಾವಿರ ಅರ್ಜಿಗಳನ್ನು ಕೂಡಲೇ ಇತ್ಯಾರ್ಥಗೊಳಿಸಿ, ಹಣ ಜಮಾ ಮಾಡಬೇಕು. ವಿವಿಧ ಸಹಾಯಧನಕ್ಕಾಗಿ ಸಲ್ಲಿಕೆ ಆಗುತ್ತಿರುವ ಅರ್ಜಿಗಳ ವಿಲೇವಾರಿ ವಿಳಂಬ ಆಗುತ್ತಿರುವುದನ್ನು ತಪ್ಪಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂಬ ಇತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಸಿಐಟಿಯು ಜಿಲ್ಲಾ ಅಧ್ಯಕ್ಷ ಶೇಕ್ಷಾಖಾದ್ರಿ, ಕಾರ್ಯದರ್ಶಿ ಅನ್ವರ್, ಅನ್ವರ್ಪಾಷಾ, ಮುನಿಸ್ವಾಮಿ ತುರ್ವಿಹಾಳ, ಸತ್ತಾರಖಾನ್, ಶರೀಫ್ ಪನ್ನೂರು, ಗೋವಿಂದರಾಜ, ವೆಂಕಟರಾಜು, ಇಸ್ಮಾಯಿಲ್ ದಿದ್ಗಿ, ವೆಂಕಟೇಶ ಮಾಕಾಪುರ, ಹೊನ್ನೂರಪ್ಪ, ಅಬ್ದುಲ್, ಭೀಮೇಶ ಬಂಗಾರಿಕ್ಯಾಂಪ್, ಚನ್ನಬಸವ, ನಾಗಲಿಂಗಪ್ಪ, ಚಂದ್ರಶೇಖರ, ಖಾದರಸಾಬ್, ರಾಮು ಮೇಸ್ತ್ರಿ ಇತರರಿದ್ದರು.