ಸಿಂದಗಿ: ಶ್ರೀಮಠದ ಸಮಾಜ ಸೇವೆಯು ನಿತ್ಯ ಮತ್ತು ನಿರಂತರವಾಗಿದೆ. ಉಚಿತ ಶಿಬಿರ, ರಕ್ತದಾನದಂಥ ರಚನಾತ್ಮಕ ಮತ್ತು ಜನಪರವಾಗಿರುವ ಆರೋಗ್ಯ ಕಾಳಜಿಗೆ ಇಡೀ ವೀರಶೈವ ಸಮಾಜ ಋಣಿಯಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಉಪಾಧ್ಯಕ್ಷ ಅಶೋಕ ಮನಗೂಳಿ ಹೇಳಿದರು.
ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ, ಬೆಂಗಳೂರು, ಅಖಿಲ ಭಾರತ ವೀರಶೈವ ಮಹಾಸಭಾ ವಿಜಯಪುರ ಮತ್ತು ಸಿಂದಗಿಯ ಶ್ರೀ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನದಿಂದ ಶ್ರೀ ಆದಿ ಜಗದ್ಗುರು ಪಂಚಾಚಾರ್ಯರ ಯುಗಮಾನೋತ್ಸವ ಹಾಗೂ ಅಖಿಲ ಭಾರತ ವೀರಶೈವ ಶಿವಾಚಾರ್ಯರ ಸಮ್ಮೇಳನ ನಿಮಿತ್ತ ಬಿಎಲ್ಡಿಇ ಸಂಸ್ಥೆಯ ಬಿ.ಎಂ. ಪಾಟೀಲ ಮೆಡಿಕಲ್ ಕಾಲೇಜ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾರಂಗಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಸದಾ ನಮ್ಮ ಬೆನ್ನೆಲುಬಾಗಿದ್ದು, ಅವರ ನೇತೃತ್ವ ಮತ್ತು ಸಮ್ಮುಖ ಜನೋಪಯೋಗಿ ಕಾರ್ಯಗಳು ಹೆಸರು ಮಾಡಿವೆ ಎಂದರು.
ಬಿಎಲ್ಡಿಇ ಸಂಸ್ಥೆಯ ಬಿ.ಎಂ. ಪಾಟೀಲ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ನಾಡಿನ ಮಠಾಧೀಶರು, ಡಾ. ವಿಜಯಕುಮಾರ ವಾರದ, ಡಾ. ಸುಭಾಷ ತಲ್ಲೂರ, ಡಾ. ಪ್ರಿಯಾಂಶು ಮೌರ್ಯ, ಡಾ. ಅಮೀನಾ ಶಿರೀನ್ ಎಂ., ಡಾ. ನಾಗರಾಜ ಕೋರಿ, ಡಾ. ಎಂ. ಶಮರೀನ್ ಬಾನು, ವೈದ್ಯಕೀಯ ಸಿಬ್ಬಂದಿ ಸುರೇಶ ಕಡಕೋಳ, ಗಂಗಾಧರ ಹಿರೇಮಠ ಇತರರಿದ್ದರು.