More

    ವಿಶ್ವಗುರು: ಸದ್ದಿಲ್ಲದೇ ಬೆಳೆಯುವ ಚೀನಾದ ಕನಸು ಭಗ್ನ?

    ವಿಶ್ವಗುರು: ಸದ್ದಿಲ್ಲದೇ ಬೆಳೆಯುವ ಚೀನಾದ ಕನಸು ಭಗ್ನ?

    ಜಗತ್ತೆಲ್ಲ ಚೀನಾದೆದುರು ಗುಟುರು ಹಾಕುತ್ತಿರುವಾಗ ಚೀನಾ ಒಂದಾದಮೇಲೊಂದು ತಪ್ಪುಗಳನ್ನು ಮಾಡುತ್ತ ಎಡವುತ್ತಿದೆಯಾ? ಜಗತ್ತನ್ನು ಆಳುವ ದೊರೆಯಾಗಬೇಕು ಎಂಬ ತನ್ನ 70 ವರ್ಷದ ಕನಸುಗಳನ್ನು ತಾನೇ ಹಾಳುಮಾಡಿಕೊಳ್ಳುತ್ತಿದೆಯಾ? ಅಥವಾ ಇವೆಲ್ಲವೂ ಚೀನಾದ ಬೃಹತ್ ಯೋಜನೆಯ ಭಾಗವೇ ಆಗಿದೆಯಾ? ಯಾವುದನ್ನೂ ಇದಮಿತ್ಥಮ್ ಎಂದು ಹೇಳಲಾಗದು ಏಕೆಂದರೆ ಚೀನಾವನ್ನು ಎಂದಿಗೂ ನಂಬಲಾಗದು. ಹಾಗೇ ಸುಮ್ಮನೆ ಕಳೆದ ಕೆಲವಾರು ತಿಂಗಳುಗಳ ಒಟ್ಟಾರೆ ಪ್ರಕ್ರಿಯೆಯನ್ನು ಅವಲೋಕಿಸಿ ನೋಡಿ. ವುಹಾನ್​ನಿಂದ ಕರೊನಾ ಹಬ್ಬಲಾರಂಭಿಸಿತು. ಆದರದು ಪಕ್ಕದ ಬೀಜಿಂಗ್​ಗೆ ಹೋಗಲಿಲ್ಲ, ದೂರದ ಇಟಲಿಯನ್ನು ತಬ್ಬಿಕೊಂಡಿತು. ವೈರಸ್ಸು ಪಕ್ಕದ ಕ್ಷೇತ್ರಗಳಿಗೆ ಹಬ್ಬದಂತೆ ತಡೆಗಟ್ಟಲು ತಾನು ಎಚ್ಚರಿಕೆಯ ಕ್ರಮಗಳನ್ನು ಕೈಗೊಂಡ ಚೀನಾ ಜಗತ್ತು ಎಚ್ಚೆತ್ತುಕೊಳ್ಳಲೆಂಬ ಮುನ್ನೆಚ್ಚರಿಕೆಯನ್ನು ಕೊಡಲೇ ಇಲ್ಲ. ಅದಕ್ಕೆ ಪ್ರತಿಯಾಗಿ ತನ್ನ ಪ್ರಭಾವಕ್ಕೆ ವಿಶ್ವ ಆರೋಗ್ಯ ಸಂಸ್ಥೆಯನ್ನು ಒಳಪಡಿಸಿ ಜಗತ್ತು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂಬ ಹೇಳಿಕೆಯನ್ನೂ ಕೊಡಿಸಿತು. ವುಹಾನಿನಲ್ಲಿ ತನ್ನಿಂದಾದ ಅಚಾತುರ್ಯಕ್ಕೆ ಜಗತ್ತು ಬಲಿಯಾಗಿಬಿಟ್ಟರೆ ತನ್ನ ವಿಶ್ವಸಾಮ್ರಾಜ್ಯದ ಕನಸು ನನಸಾಗಿ ಬಿಡುವುದೆಂಬ ಬಯಕೆ ಅದಕ್ಕಿತ್ತು! ಆದರೆ ಅಂದುಕೊಂಡಂತೇನೂ ನಡೆಯಲೇ ಇಲ್ಲ.

    ಜಗತ್ತು ತಿರುಗಿಬಿತ್ತು. ಅಮೆರಿಕ ಆರಂಭದಿಂದಲೂ ಚೀನಾವನ್ನು ದೋಷಿ ಎಂದಿತು. ಯುರೋಪಿಯನ್ ಯುನಿಯನ್ ಅಮೆರಿಕದ ಮಾತಿಗೆ ದನಿಗೂಡಿಸಿತು. ಚೀನಾದ ಮರ್ಜಿಯಲ್ಲೇ ಇರುವ ಆಫ್ರಿಕಾದ ರಾಷ್ಟ್ರಗಳು ಭುಸುಗುಡಲಾರಂಭಿಸಿದವು. ಆಸ್ಟ್ರೇಲಿಯಾವಂತೂ ಒಂದು ಹೆಜ್ಜೆ ಮುಂದೆ ಹೋಗಿ ಸಾರ್ವಜನಿಕವಾಗಿ ದನಿ ಎತ್ತಿತು. ಈಗ ಬಗ್ಗಿಬಿಟ್ಟರೆ ಎಲ್ಲರೂ ಗುದ್ದಿಯೇಬಿಡುತ್ತಾರೆ ಎಂದರಿತ ಚೀನಾ ತನ್ನ ಸೋಲನ್ನು ತೋರ್ಪಡಿಸಿಕೊಳ್ಳಲೇ ಇಲ್ಲ. ತಾನು ಈಗಲೂ ಬಲಾಢ್ಯನಾಗಿದ್ದೇನೆ ಎಂದು ಮುಖವಾಡ ಹಾಕಿಕೊಳ್ಳುವ ಭರದಲ್ಲಿ ಆಸ್ಟ್ರೇಲಿಯಾದ ವಿರುದ್ಧ ಗುಟುರು ಹಾಕಿತು. ಮುಲಾಜು ನೋಡದ ಆಸ್ಟ್ರೇಲಿಯಾ ವಿಶ್ವಸಂಸ್ಥೆಗೆ ವುಹಾನ್ ವೈರಸ್​ನ ಕುರಿತಂತೆ ಬರೆದ ಪತ್ರಕ್ಕೆ ತಾನೂ ಸಹಿ ಹಾಕಿತು. ಏಷ್ಯಾದ ಬಹುತೇಕ ರಾಷ್ಟ್ರಗಳು ಈ ವಿಚಾರದಲ್ಲಿ ಚೀನಾ ವಿರುದ್ಧವೇ ಮಾತನಾಡಿದ್ದವು. ಅದರ ಹಿಂದು-ಹಿಂದೆಯೇ ಚೀನಾ ಕಳೆದುಹೋಗುತ್ತಿರುವ ತನ್ನ ಶಕ್ತಿಯನ್ನು ಬಲಪಡಿಸಿಕೊಳ್ಳಲೆಂದು ಅತ್ತ ಜಪಾನಿನ ವಿರುದ್ಧ, ಇತ್ತ ಭಾರತದ ವಿರುದ್ಧ ಕಾಲ್ಕೆರೆದುಕೊಂಡು ಜಗಳಕ್ಕೆ ನಿಂತಿತು!

    ಚೀನಾದ ಸದ್ಯದ ಸ್ಥಿತಿ ಬಲು ಕೆಟ್ಟದಾಗಿದೆ. ಜಾಗತಿಕವಾಗಿ ಅದರ ಮೌಲ್ಯ ಕುಸಿದಿದೆ. ಚೀನಾದ ಜನರಿಂದ ಹಿಡಿದು ಕಂಪನಿಗಳವರೆಗೆ ಯಾವುದನ್ನೂ ಜನ ನಂಬುತ್ತಿಲ್ಲ. ಕೊಳ್ಳಲು ಮುಂದೆ ಬರುತ್ತಿಲ್ಲ. ಭಾರತೀಯರು ಟಿಕ್​ಟಾಕ್ ಅನ್ನು ದ್ವೇಷಿಸಿದ ರೀತಿಯೇ ಇದಕ್ಕೆ ಸಮರ್ಥ ಉದಾಹರಣೆ. ರಫ್ತಿನ ಮೇಲೆಯೇ ರಾಷ್ಟ್ರವನ್ನು ಕಟ್ಟಿರುವ ಚೀನಾಕ್ಕೆ ಇದು ಸುಲಭ ತುತ್ತಲ್ಲ. ಅದಾಗಲೇ ಕಾರ್ಖಾನೆಗಳು ಮುಚ್ಚಿ ಕೆಲಸ ಕಳೆದುಕೊಂಡ ಜನ ಬೀದಿಗೆ ಬಂದು ನಿಂತಿದ್ದಾರೆ. ಅನೇಕ ಕಂಪನಿಗಳು ಚೀನಾದ ಸಹವಾಸವೇ ಬೇಡವೆಂದು ಭಾರತ ಸೇರಿ ಬೇರೆ-ಬೇರೆ ರಾಷ್ಟ್ರಗಳತ್ತ ಮುಖಮಾಡಿವೆ. ಸಹಜವಾಗಿಯೇ ಚೀನಾದಲ್ಲಿ ಆತಂಕದ ಮೋಡ. ಒಂದೆಡೆ ಹಾಂಗ್​ಕಾಂಗ್​ನಲ್ಲಿ ಪ್ರಜಾಪ್ರಭುತ್ವದ ಪರವಾದ ಮೆರವಣಿಗೆಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ಉಯ್ಘುರ್ ಮುಸಲ್ಮಾನರು ಪ್ರತ್ಯೇಕತೆಯ ಮಾತುಗಳನ್ನಾಡುತ್ತಿದ್ದಾರೆ. ಹಸಿವು, ಬಡತನಗಳಿಂದ ಕಂಗಾಲಾಗಿರುವ ಜನತೆ ಕಮ್ಯುನಿಸ್ಟ್ ಸರ್ಕಾರದಿಂದ ಮುಕ್ತಿ ಸಿಕ್ಕರೆ ಸಾಕು ಎಂದು ಬಯಸುತ್ತಿರುವುದಕ್ಕೆ ಇವೆಲ್ಲವೂ ಕಾರಣವಾಗಿವೆ. ಈ ಪರಿಯ ಭೀಕರ ಆಂತರಿಕ ವಿದ್ರೋಹವನ್ನು ತಡೆಯಲು ಇರುವ ಏಕೈಕ ಮಾರ್ಗ ಪ್ರಬಲವಾದ ಏಕತೆಯನ್ನು ರೂಪಿಸುವುದು ಮಾತ್ರ. ಅದು ಸಾಧ್ಯವಾಗಬೇಕೆಂದರೆ ‘ಸುತ್ತಲಿನ ರಾಷ್ಟ್ರಗಳು ಚೀನಾವನ್ನು ನುಂಗಲು ಸಿದ್ಧತೆ ನಡೆಸಿವೆ, ರಾಷ್ಟ್ರದ ಅಸ್ಮಿತೆಯನ್ನು ಕಾಪಾಡಲು ಎಲ್ಲ ಸಂಕಟಗಳನ್ನೂ ಮರೆತು ಒಟ್ಟಿಗಿರಬೇಕಾದ್ದು ಅಗತ್ಯ’ ಎಂಬ ಭಾವನೆಯನ್ನು ಜನಮಾನಸದಲ್ಲಿ ಬಲವಾಗಿ ಮೂಡಿಸಬೇಕಿದೆ. ಹೀಗಾಗಿಯೇ ಈ ಅನವಶ್ಯಕ ಜಗಳ!

    ರಾಷ್ಟ್ರದಲ್ಲಿ ಸರಿಯಾಗಿ ನಡೆಯುತ್ತಿರುವುದು ಯಾವುದು, ತಪ್ಪು ಯಾವುದು ಎಂಬುದಕ್ಕೆ ಒಂದು ಲಿಟ್ಮಸ್ ಟೆಸ್ಟ್ ಇದೆ. ಅದನ್ನು ಪ್ರಯೋಗಿಸಿ ನೋಡಿ ಸರಿ-ತಪ್ಪುಗಳನ್ನು ಅರ್ಥೈಸಿಕೊಂಡುಬಿಡಬಹುದು. ಅದೇನು ಗೊತ್ತೇ? ಯಾವುದಾದರೂ ವಿಚಾರದಲ್ಲಿ ಕಾಂಗ್ರೆಸ್ಸಿನ ಅನಿಸಿಕೆ ಏನಿರುತ್ತದೆ ಎಂಬುದನ್ನು ತಿಳಿದುಕೊಂಡರಾಯ್ತು. ಅದರ ವಿರುದ್ಧವಾದದ್ದು ಭಾರತದ ಹಿತದಲ್ಲಿ ಇರುತ್ತದೆ. ಸರ್ಜಿಕಲ್ ಸ್ಟ್ರೈಕ್ ಆದಾಗ ಅದು ಸುಳ್ಳೆಂದು, ಅದಕ್ಕೆ ಪುರಾವೆಗಳು ಬೇಕೆಂದು ಕಾಂಗ್ರೆಸ್ಸು ಕೇಳಿತು. ಏರ್​ಸ್ಟ್ರೈಕ್ ಮಾಡುವ ಮುನ್ನ ಕಠಿಣ ಕ್ರಮ ಪಾಕಿಸ್ತಾನದ ವಿರುದ್ಧ ಕೈಗೊಂಡರೆ ಅಂತಾರಾಷ್ಟ್ರೀಯ ಸಂಸ್ಥೆಗಳು ನಮ್ಮ ವಿರುದ್ಧ ನಿಲ್ಲಬಹುದು ಎಂದಿತ್ತು. ತೀರಾ ಇತ್ತೀಚೆಗೆ ಮೋದಿ ಲಾಕ್​ಡೌನ್ ಹೇರಿದಾಗ ಅದನ್ನು ಹೇರಬಾರದಿತ್ತು ಎಂದಿತು. ಅದನ್ನು ತೆಗೆದೊಡನೆ ಇಷ್ಟು ವೇಗವಾಗಿ ತೆಗೆಯಬಾರದಿತ್ತು ಎಂದೂ ಹೇಳಿತು. ಲಾಕ್​ಡೌನ್ ವ್ಯರ್ಥವಾಯಿತೆಂಬ ಪ್ರಚಾರ ಆನಂತರ ಮಾಡಿದ್ದೂ ಕಾಂಗ್ರೆಸ್ಸೇ. ಬಹುಶಃ ನೀವು ಮರೆತಿರಬಹುದು ಚುನಾವಣೆಯ ಸಂದರ್ಭದಲ್ಲಿ ಕೈಲಾಸಯಾತ್ರೆಗೆ ಹೋಗುತ್ತೇನೆಂದು ಒಂದಷ್ಟು ಫೋಟೋ ಕ್ಲಿಕ್ಕಿಸಿಕೊಂಡು ಬಂದ ರಾಹುಲ್ ಹಿಂದೂಗಳನ್ನು ಸೆಳೆಯಲು ಕಸರತ್ತನ್ನು ಮಾಡಿದ್ದರು. ಆದರೆ ಆನಂತರ ಮಾತನಾಡುವಾಗ ಯಾತ್ರೆಯಲ್ಲಿ ಚೀನಾ ಆರ್ವಿುಯ ಅಧಿಕಾರಿಗಳೊಂದಿಗೆ ತಾನು ಚರ್ಚೆ ನಡೆಸಿದೆ ಎಂದೂ ಬಾಯ್ಬಿಟ್ಟಿದ್ದರು. ಇದ್ದಕ್ಕಿದ್ದಂತೆ ಒಮ್ಮೆ ಭಾರತದ ಚೀನೀ ರಾಯಭಾರಿಯನ್ನು ಗುಪ್ತವಾಗಿ ಭೇಟಿಮಾಡಿದ ರಾಹುಲ್ ಚೀನಾದ ವೆಬ್​ಸೈಟುಗಳಲ್ಲಿ ಈ ವಿಚಾರ ಪ್ರಕಟವಾಗುವವರೆಗೂ ಅದನ್ನು ಮುಚ್ಚಿಟ್ಟು ಆನಂತರ ತಡಬಡಾಯಿಸಿದ್ದರು.

    ಚೀನಾದೊಂದಿಗೆ ಇಷ್ಟು ನಿಕಟ ಸಂಬಂಧ ಹೊಂದಿರುವ ಕಾಂಗ್ರೆಸ್ಸು, ರಾಹುಲ್ ಮೊನ್ನೆ ಇದ್ದಕ್ಕಿದ್ದಂತೆ ಚೀನೀ ಸೇನೆ ಭಾರತದ ಗಡಿಯೊಳಕ್ಕೆ 5000ದಷ್ಟು ಸೈನಿಕರನ್ನು ಕರಕೊಂಡು ಒಳಬಂದಿದೆ ಎಂಬ ಪುಕಾರು ಹಬ್ಬಿಸಿದರು. ಬಹುಶಃ ಭಾರತದ ಸೇನಾ ಮುಖ್ಯಸ್ಥರು, ರಾಷ್ಟ್ರೀಯ ರಕ್ಷಣಾದಳದ ಪ್ರಮುಖರು ಮತ್ತು ಮೋದಿ-ಅಮಿತ್ ಷಾ, ರಾಜನಾಥ್ ಸಿಂಗ್​ರಂತಹವರು ಚೀನಾ ವಿರುದ್ಧ ಹೇಳಿಕೆಗಳನ್ನು ಕೊಡಲಿ ಎಂಬುದು ಅವರ ಉದ್ದೇಶವಾಗಿತ್ತು ಎನಿಸುತ್ತದೆ. ಆದರೆ ಕಾಂಗ್ರೆಸ್ಸಿನ ಪ್ರತಿ ನಡೆಯನ್ನೂ ಸೂಕ್ಷ್ಮವಾಗಿ ಅವಲೋಕಿಸುವ ಈ ಪ್ರಮುಖರು ಚೀನಾ ವಿರುದ್ಧ ಯಾವ ಹೇಳಿಕೆಯನ್ನೂ ಕೊಡಲಿಲ್ಲ. ಬದಲಿಗೆ ಗಡಿಯ ತಮ್ಮ ಭಾಗದಲ್ಲಿ ಜಮಾವಣೆಗೊಳ್ಳುತ್ತಿದ್ದ ಚೀನೀ ಸೈನಿಕರೆದುರಿಗೆ ನಮ್ಮ ಸೈನಿಕರನ್ನು ನಿಲ್ಲಿಸಿ ಅತ್ತ ಕಡೆಯವರು ತೆಪ್ಪಗೆ ಮರಳುವಂತೆ ಮಾಡಿದ್ದರು!

    ಇದನ್ನೂ ಓದಿ: ಹುಷಾರಾದ ಬಳಿಕ ಪುತ್ರ ತನ್ನ ತಾಯಿಯನ್ನೇ ನಡುರಸ್ತೆಯಲ್ಲಿ ಬಿಟ್ಟ, ಆದರೂ ದೈವ ಆಕೆಯ ಕೈಬಿಡಲಿಲ್ಲ!

    ಚೀನಾ ಒಂದೆಡೆ ದಾಳಿಗೆ ಪ್ರಚೋದಿಸುತ್ತ ಮತ್ತೆಲ್ಲಿಯೋ ತನಗೆ ಬೇಕಾದ್ದನ್ನು ಮಾಡಿಕೊಳ್ಳುತ್ತಿರುತ್ತದೆ. ಭಾರತವೂ ಕಡಿಮೆಯಲ್ಲ. ಹಾಗೆ ನೋಡಿದರೆ ಈ ಬಾರಿ ಮೊದಲ ಆಕ್ರಮಣ ಭಾರತದ್ದೇ. ಪಾಕ್​ನಿಂದ ನಿರಂತರವಾಗಿ ನುಸುಳುಕೋರರನ್ನು ಒಳತಳ್ಳುತ್ತ ಭಾರತದ ದೃಷ್ಟಿ ಅತ್ತ ನೆಡುವಂತೆ ಮಾಡಿ ಇತ್ತ ಲಡಾಖ್​ನ ಗಡಿಯೊಳಗೆ ಅವಘಡವನ್ನೇನಾದರೂ ಮಾಡಬೇಕೆಂಬುದು ಚೀನಾದ ಉದ್ದೇಶವಾಗಿತ್ತು. ಇದನ್ನು ಮುಂಚಿತವಾಗಿಯೇ ಅರಿತ ಭಾರತ ಪಿಒಕೆಯ ಮೇಲೆಯೇ ಆಕ್ರಮಣ ಮಾಡುವ ಮಾತುಗಳನ್ನಾಡಿದ್ದಲ್ಲದೆ ಗಿಲ್ಗಿಟ್-ಬಾಲ್ಟಿಸ್ತಾನಗಳನ್ನು ತನ್ನ ಗಡಿ ಎಂದು ತೋರಿಸುವ ಸಾಹಸವನ್ನು ಏಳು ದಶಕಗಳಲ್ಲಿ ಮೊದಲ ಬಾರಿಗೆ ಮಾಡಿತು. ಪಾಕ್ ಆಕ್ರಮಿತ ಕಾಶ್ಮೀರವನ್ನು ಕಳೆದುಕೊಳ್ಳುವುದೆಂದರೆ ತನ್ನ ಒನ್​ಬೆಲ್ಟ್ ಒನ್​ರೋಡ್ ಯೋಜನೆಗೆ ಬಲುದೊಡ್ಡ ಧಕ್ಕೆ ಎಂದರಿತ ಚೀನಾ ಅನಿವಾರ್ಯವಾಗಿ ಇತ್ತ ಕಾಲು ಹಾಕಿದಂತೆ ಮಾಡಿ ತೆಪ್ಪಗೆ ಮರಳಬೇಕಾಯ್ತು. ಇಲ್ಲವಾದಲ್ಲಿ ಕರೊನಾ ಎದುರಿಸಬೇಕಾದ ಈ ಹೊತ್ತಲ್ಲಿ ಭಾರತ ಪಾಕ್ ಆಕ್ರಮಿತ ಕಾಶ್ಮೀರವನ್ನು ಕಸಿಯುವ ಮಾತಾಡಬೇಕಾದ ಅವಶ್ಯಕತೆ ಇರಲಿಲ್ಲ. ಅತ್ತ ಗಡಿಯಲ್ಲಿ ಭಾರತ ನಿರ್ವಿುಸುತ್ತಿರುವ ಮಜಬೂತು ರಸ್ತೆಗಳ ಕುರಿತಂತೆ ಚೀನಾ ಕೂಡ ಒಂದೂವರೆ ದಶಕದ ನಂತರ ಕ್ಯಾತೆ ತೆಗೆಯುವ ಅಗತ್ಯವಿರಲಿಲ್ಲ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಯಾವುದು ಕಾಣುತ್ತದೆಯೋ ಅದು ಸತ್ಯವಲ್ಲ. ಅದರ ಹಿಂದೆ ಅಡಗಿರುವುದು ಬೇರೆಯೇ ಇದೆ.

    ಚೀನಾ ಮೊದಲಿನಿಂದಲೂ ಹಾಗೆಯೇ. ಮನಸೊಳಗೊಂದಿಟ್ಟುಕೊಂಡು ಹೊರಗೆ ಮತ್ತೊಂದನ್ನು ಹೇಳುತ್ತ ತನ್ನ ಕಾರ್ಯವನ್ನು ಈಡೇರಿಸಿಕೊಳ್ಳುತ್ತಲೇ ಬಂದಿದೆ. ಆರಂಭದಿಂದಲೂ ಅವರ ಘೊಷಣೆ ಒಂದೇ, ‘ಹಳಬರು ಮಾಡಿರುವ ತಪ್ಪನ್ನು ನಾವೆಂದಿಗೂ ಮಾಡುವುದಿಲ್ಲ; ಶಕ್ತರಾದೊಡನೆ ಜಗತ್ತನ್ನು ಆಳಬೇಕೆಂದು ನಾವೆಂದೂ ಬಯಸುವುದಿಲ್ಲ’. ಈ ಆಧಾರದ ಮೇಲೆಯೇ 90ರ ದಶಕದಲ್ಲಿ ‘ನಂಬಿಕೆಯೇ ಬುಡ’ ಎಂದರು. 2000ದಲ್ಲಿ ‘ಶಾಂತಿಯಿಂದೊಡಗೂಡಿದ ಬೆಳವಣಿಗೆ’ ಎಂದರು. ಮುಂದಿನ ದಶಕದಲ್ಲಿ ‘ಜೊತೆಗೂಡಿ ಬೆಳೆಯಲು ಸಹಾಯ ಮಾಡೋಣ’ ಎಂದರು. ಮತ್ತೀಗ ‘ಶತಾಯ-ಗತಾಯ ಆಳಬೇಕಷ್ಟೇ’ ಎನ್ನುತ್ತಿದ್ದಾರೆ. ಭೂತಕನ್ನಡಿ ಹಿಡಿದುಕೊಂಡು ಇದನ್ನು ಹಿಗ್ಗಿಸಿ ನೋಡಿದರೆ ಚೀನಾದ ಮನಸ್ಥಿತಿ ಮುನ್ನೆಲೆಗೆ ಬರುತ್ತದೆ.

    ಆಂತರಿಕ ಸಂಘರ್ಷವನ್ನೆಲ್ಲ ಎದುರಿಸಿ 1949ರಲ್ಲಿ ಮಾವೋ ನೇತೃತ್ವದಲ್ಲಿ ಕಮ್ಯುನಿಸ್ಟ್ ಪಾರ್ಟಿ ಚೀನಾದ ಅಧಿಕಾರವನ್ನು ತನ್ನ ತೆಕ್ಕೆಗೆ ಹಾಕಿಕೊಂಡಾಗ ಆಂತರ್ಯದಲ್ಲಿ ನೂರು ವರ್ಷಗಳೊಳಗೆ ಜಗತ್ತನ್ನಾಳಬೇಕೆಂಬ ಕನಸ್ಸನ್ನು ಕಟ್ಟಿಕೊಂಡಿತ್ತು ಅದು. ಆದರೆ ಅದನ್ನು ಹೊರಗೆಂದಿಗೂ ತೋರಲೇ ಇಲ್ಲ. ಆಂತರಿಕ ಸಂಘರ್ಷಗಳಿಂದ ಬಸವಳಿದು ಹೋಗಿದ್ದ ಜನರನ್ನು ಹೊರಜಗತ್ತಿನ ಸಂಪರ್ಕದಿಂದ ದೂರಮಾಡಿದ ಮಾವೋ ತಮ್ಮನ್ನು ತಾವು ಸುಧಾರಿಸಿಕೊಳ್ಳಲು ಅವಕಾಶ ಮಾಡಿಕೊಟ್ಟ. ಆರ್ಥಿಕವಾಗಿ ಬೆಳೆಯಲು ಬೇಕಾದ ವಿಶ್ವಾಸವನ್ನು ತುಂಬಿದ. 20 ವರ್ಷಗಳ ಕಾಲ ಆತ ಜನರೊಳಗೆ ತುಂಬಿದ ವಿಶ್ವಾಸ ಎಂಥದ್ದಿತ್ತೆಂದರೆ ವಿಶ್ವವನ್ನೇ ಆಳಲು ಬೇಕಾದ ಶಕ್ತಿಯನ್ನು ಅವರು ತಮ್ಮೊಳಗೆ ಸಾಕ್ಷಾತ್ಕರಿಸಿಕೊಂಡಿದ್ದರು. ಆನಂತರ ಬಂದ ಡೆಂಗ್​ಶೋಪಿಂಗ್ ರಾಷ್ಟ್ರವನ್ನು ಒಂದು ಹೆಜ್ಜೆ ಮುಂದಕ್ಕೆ ತಂದು ಜಾಗತಿಕ ಬೆಸುಗೆಯನ್ನು ಹಾಕಿದ. ಕೃಷಿ, ಕೈಗಾರಿಕೆ, ವಿಜ್ಞಾನ-ತಂತ್ರಜ್ಞಾನ ಮತ್ತು ರಕ್ಷಣೆ ಇದು ಅವನ ಆದ್ಯತೆಯ ಕ್ಷೇತ್ರಗಳಾಗಿದ್ದವು. ರಕ್ಷಣೆಗೆ ಕೊನೆಯ ಆದ್ಯತೆಯನ್ನು ಕೊಟ್ಟಿದ್ದನ್ನು ಗಮನಿಸಲೇಬೇಕು. 80ರ ದಶಕದ್ದುದ್ದಕ್ಕೂ ಚೀನಾದ ಆರ್ಥಿಕ ಸ್ಥಿತಿ ಬೆಳವಣಿಗೆಯನ್ನು ಕಂಡಿದ್ದು ಈ ಹಾದಿಯಲ್ಲಿಯೇ. ಯಾರೊಂದಿಗೂ ನೇರ ತಂಟೆಗಿಳಿಯದೇ ಎಲ್ಲರನ್ನೂ ತಮಗೆ ಬೇಕಾದಂತೆ ಒಲಿಸಿಕೊಳ್ಳುತ್ತಲೇ ತನ್ನನ್ನು ತಾನು ಆರ್ಥಿಕ ಶಕ್ತಿಯಾಗಿ ರೂಪಿಸಿಕೊಳ್ಳುತ್ತ ನಡೆಯಿತು ಚೀನಾ.

    ಮಿಲಿಟರಿ ಶಕ್ತಿಯಾಗಿ ಬೆಳೆಯುವ ಲಕ್ಷಣ ತೋರದಿದ್ದುದರಿಂದ ಅಮೆರಿಕ- ರಷ್ಯಾಗಳು ಚೀನಾದತ್ತ ಅನುಮಾನದ ಕಂಗಳನ್ನು ನೆಡಲಿಲ್ಲ. ನಿಧಾನವಾಗಿ ತನ್ನ ಸೈನ್ಯವನ್ನೂ, ಯುದ್ಧ ತಂತ್ರಜ್ಞಾನವನ್ನು ವಿಸ್ತರಿಸಿಕೊಳ್ಳುತ್ತ ನಡೆದ ಚೀನಾ ಏಷ್ಯಾದ ಬಲಾಢ್ಯ ರಾಷ್ಟ್ರವಾಗಿ ಬೆಳೆದು ನಿಂತಿತು. ತನ್ನ ಉದ್ದೇಶವೂ ಅದೇ ಆಗಿದೆ ಎಂಬುದನ್ನು ಜಗತ್ತಿಗೆ ಸಾಬೀತುಪಡಿಸಿತು. ತನ್ನ ಇಚ್ಛೆಯನ್ನು ಹೊರಗೆ ತೋರದಂತೆ ಕೆಲಸ ಮಾಡುತ್ತ ಸಾಗುವ ಕಲೆ ಚೀನಾಕ್ಕೆ ವಿಶೇಷವಾಗಿ ಸಿದ್ಧಿಸಿದೆ. ಇಲ್ಲವಾದರೆ ಚೀನಾ ಟಿಬೇಟನ್ನು ಕಸಿದುಕೊಂಡಾಗ ವಿರೋಧಿಸುವ ಗೋಜಿಗೂ ನಾವು ಹೋಗಲಿಲ್ಲ ಎಂಬುದು ಆಶ್ಚರ್ಯವಲ್ಲದೇ ಮತ್ತೇನು! ಚೀನಾದ ಕುರಿತಂತೆ ದೂರದೃಷ್ಟಿಯೇ ಇಲ್ಲದಿದ್ದ ನೆಹರೂ ‘ಹಿಂದೂ-ಚೀನೀ ಭಾಯಿ ಭಾಯಿ’ ಮಂತ್ರ ಜಪಿಸುತ್ತ ಭಾರತಕ್ಕೆ ಮರೆಯಲಾಗದ ಆಘಾತ ಮಾಡಿಟ್ಟುಹೋದರು.

    ಅತ್ತ ಚೀನಾ ಇವೆಲ್ಲ ಲಾಭವನ್ನು ಪಡೆದುಕೊಂಡೇ ವಿಶ್ವಸಂಸ್ಥೆಯ ಕಾಯಂ ಸದಸ್ಯತ್ವ ಸ್ಥಾನವನ್ನು ಪಡೆದುಬಿಟ್ಟಿತು. ಅದರ ಆಧಾರದ ಮೇಲೆಯೇ ಅನೇಕ ನಿರ್ಣಯಗಳಲ್ಲಿ ಮೂಗು ತೂರಿಸುತ್ತ ಏಷ್ಯಾದ ಯಾವುದೇ ಕೆಲಸಗಳಿಗೂ ತನ್ನ ಅನುಮತಿ ಬೇಕೇ ಬೇಕು ಎಂಬ ವಾತಾವರಣ ರೂಪಿಸಿಕೊಂಡಿತು. ಪದೇಪದೇ ಅಮೆರಿಕವನ್ನು ಪಕ್ಕಕ್ಕೆ ತಳ್ಳಿ ವಿಶ್ವವನ್ನಾಳುವ ರಾಷ್ಟ್ರವಾಗಬೇಕೆಂಬ ಬಯಕೆ ತನಗೆ ಎಳ್ಳಷ್ಟೂ ಇಲ್ಲ ಎಂಬುದನ್ನು ಹೇಳಿಕೊಳ್ಳುತ್ತಲೇ ಅದರ ವಿರುದ್ಧ ದಿಕ್ಕಿನಲ್ಲಿ ಬಲವಾದ ಹೆಜ್ಜೆಯನ್ನು ಊರುತ್ತಲೇ ನಡೆಯಿತು. ಸ್ವತಃ ಅಮೆರಿಕ ಸೇರಿ ಜಗತ್ತಿನ ಅನೇಕ ರಾಷ್ಟ್ರಗಳು ಆರ್ಥಿಕ ಅಭಿವೃದ್ಧಿಗೆ ತನ್ನನ್ನು ಅವಲಂಬಿಸಲೇಬೇಕಾದ ಸ್ಥಿತಿ ಬಂದಿದೆ ಎಂದರಿತೊಡನೆ ಚೀನಾ ಜಾಗತಿಕ ಶಕ್ತಿಯಾಗುವತ್ತ ಗಮನಹರಿಸಲಾರಂಭಿಸಿತು. ಜಗತ್ತಿನ ಒಟ್ಟೂ ರಾಷ್ಟ್ರಗಳ ಅರ್ಧದಷ್ಟರ ಮೇಲೆ ಭಿನ್ನ-ಭಿನ್ನ ಸ್ವರೂಪದಲ್ಲಿ ತನ್ನ ಪ್ರಭಾವವನ್ನು ಬೀರಿ ತನ್ನತ್ತ ವಾಲುವ ಅನಿವಾರ್ಯತೆಗೆ ಸಿಲುಕಿಸಿತು!

    ಟ್ರಂಪ್ ಅಧಿಕಾರಕ್ಕೆ ಬರುವವರೆಗೂ ಅಮೆರಿಕದೊಳಗೇ ಒಂದು ಚೀನಾ ನಿರ್ವಣವಾಗುತ್ತಿದೆ ಎಂಬುದು ಗೊತ್ತೇ ಆಗಿರಲಿಲ್ಲ. ಚೀನಾದ ಈ ಹಾದಿ ಬಲು ರೋಚಕವಾದದ್ದು. ಮುಂದಿನ ವಾರ ಮತ್ತೊಂದಷ್ಟು ಸಂಗತಿಗಳನ್ನು ಹಂಚಿಕೊಳ್ಳುತ್ತೇನೆ. ವುಹಾನ್ ವೈರಸ್​ನ ಅವಕಾಶ ಬಳಸಿಕೊಂಡು ಚೀನಾ ಸೂಪರ್​ಪವರ್ ಆಗಿಬಿಡಬಲ್ಲದೇ ಎಂಬ ಪ್ರಶ್ನೆಗೆ ಬಹುಶಃ ಅಲ್ಲಿ ಉತ್ತರ ಸಿಕ್ಕೀತು.

    (ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts