ಬೆಂಗಳೂರು ಬಸವಾದಿ ಶರಣರು ಅನುಭವ ಮಂಟಪದ ಮೂಲಕ ಶ್ರೇಣೀಕೃತ ಸಮಾಜವನ್ನು ಸಮಾನ ಸಮಾಜವನ್ನಾಗಿಸಲು ಶರಣರು ಶ್ರಮಿಸಿದರು. ಶರಣರೆಂದರೆ ಮೇಲ್ಜಾತಿಯವರಲ್ಲ. ಶರಣರಿಗೆ ಜಾತಿಯೇ ಇಲ್ಲ. ಜಾತಿ ವ್ಯವಸ್ಥೆಯನ್ನು ನಾವೇ ಮಾಡಿಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಗುರುವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ ಸಹಯೋಗದಲ್ಲಿ ಆಯೋಜಿಸಿದ್ದ 18ನೇ ವರ್ಷದ ‘ರಮಣಶ್ರೀ ಶರಣ ಪ್ರಶಸ್ತಿ-2023 ಮತ್ತು ರಮಣಶ್ರೀ ಪ್ರತಿಷ್ಠಾನದ ಅಧ್ಯಕ್ಷ ಎಸ್. ಷಡಕ್ಷರಿ ಅವರ ‘ಕ್ಷಣ ಹೊತ್ತು ಆಣಿ ಮುತ್ತು ಭಾಗ-12 ಮತ್ತು 13’ ಪುಸ್ತಕವನ್ನು ಬಿಡುಗಡೆ, ರಮಣಶ್ರೀ ವೆಬ್ಸೈಟ್ ಅನಾವರಣಗೊಳಿಸಿ ಅವರು ಮಾತನಾಡಿದರು.
‘ಮನುಷ್ಯ ಹುಟ್ಟುತ್ತಾ ವಿಶ್ವಮಾನವ, ಬೆಳೆಯುತ್ತಾ ಅಲ್ಪಮಾನವರಾಗುತ್ತೇವೆಂದು ಕುವೆಂಪು ಹೇಳಿದ್ದರು. ನಾವು ವಿಶ್ವಮಾನವರಾಗದಿದ್ದರೂ ಪರವಾಗಿಲ್ಲ. ಆದರೆ, ಅಲ್ಪಮಾನವರಾಗಬಾರದು.
ಅಲ್ಪಮಾನರಾಗಿಬಿಟ್ಟರೆ ನಮ್ಮ ಬದುಕು ವ್ಯರ್ಥವಾಗಲಿದೆ ಎಂದರು.
ಬಸವಾದಿ ಶರಣರು ಜಾತಿ/ವರ್ಗ ರಹಿತ ಸಮಾಜ ವ್ಯವಸ್ಥೆ, ಪರಸ್ಪರ ಪ್ರೀತಿ ವಿಶ್ವಾಸದಿಂದ ಇರುವ ಸಮಾಜ ನಿರ್ಮಾಣವಾಗಬೇಕು ಎಂದಿದ್ದರು. ಪ್ರಾಣಿಗಳನ್ನು ಪ್ರೀತಿಸುವ ಮನುಷ್ಯ ದ್ವೇಷ, ವೈರತ್ವ, ಅಸೂಯೆ ಪಡುತ್ತಿರುವುದು ವಿಪರ್ಯಾಸ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಮಣಶ್ರೀ ಪ್ರತಿಷ್ಠಾನದ ಅಧ್ಯಕ್ಷ ಎಸ್. ಷಡಕ್ಷರಿ, ಪರಿಷತ್ತಿನ ಅಧ್ಯಕ್ಷ ಅಪ್ಪಾರಾವ್ ಅಕ್ಕೋಣೆ, ಮಾಜಿ ಸಚಿವ ವಿ. ಸೋಮಣ್ಣ, ಹಿರಿಯ ಸಾಹಿತಿ ಗೋ.ರು. ಚೆನ್ನಬಸಪ್ಪ, ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾದ ನಿವೃತ್ತ ಐಎಎಸ್ ಅಧಿಕಾರಿ ಬಿ. ಸೋಮಶೇಖರ್, ಕಸಾಪ ಮಾಜಿ ಅಧ್ಯಕ್ಷ ಮನು ಬಳಿಗಾರ್, ಕನ್ನಡಪ್ರಭ ಸಂಪಾಧಕ ರವಿ ಹೆಗಡೆ ಮತ್ತು ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ ಉಪಸ್ಥಿತರಿದ್ದರು.