ಹಾನಗಲ್ಲ: ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮೂರನೇ ಅವಧಿಗೆ ಬಿಜೆಪಿ ಬೆಂಬಲಿತರಾದ ಮಕರವಳ್ಳಿ ಕ್ಷೇತ್ರದ ಸಿದ್ದಪ್ಪ ಬಂಗಾರೆಪ್ಪ ಬಂಗಾರೇರ ಅಧ್ಯಕ್ಷ ಹಾಗೂ ಶೀಗಿಹಳ್ಳಿ ಕ್ಷೇತ್ರದ ಗೀತಾ ತಿಪ್ಪಣ್ಣ ಕೋರಿ ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಎಪಿಎಂಸಿ ಕಾರ್ಯಾಲಯದಲ್ಲಿ ಬುಧವಾರ ಜರುಗಿದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಎರಡೂ ಸ್ಥಾನಗಳಿಗೆ ತಲಾ ಒಂದೊಂದೇ ನಾಮಪತ್ರಗಳು ಸಲ್ಲಿಕೆಯಾಗಿತ್ತು. ಹೀಗಾಗಿ ಅಧ್ಯಕ್ಷರಾಗಿ ಸಿದ್ದಪ್ಪ ಬಂಗಾರೆಪ್ಪ ಬಂಗಾರೇರ, ಉಪಾಧ್ಯಕ್ಷೆಯಾಗಿ ಗೀತಾ ತಿಪ್ಪಣ್ಣ ಕೋರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ತಾಲೂಕು ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ ಪ್ರಕಟಿಸಿದರು.
ನಂತರ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಶಾಸಕ ಸಿ.ಎಂ. ಉದಾಸಿ, ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಯಾವುದೇ ಅನ್ಯಾಯವಾಗದು. ತಾಲೂಕಿನಲ್ಲಿ ಭತ್ತದ ಪೈರು ಕುಂಠಿತಗೊಂಡು ಗೋವಿನಜೋಳ ಹಾಗೂ ಶುಂಠಿ ಬೆಳೆಗಳು ಆವರಿಸಿಕೊಳ್ಳುತ್ತಿವೆ. ಅವೆಲ್ಲವುಗಳಿಗೆ ಮಾರುಕಟ್ಟೆ ಒದಗಿಸಬೇಕಾದ ಜವಾಬ್ದಾರಿ ಎಪಿಎಂಸಿಗಳದ್ದಾಗಬೇಕು. ಮಾರುಕಟ್ಟೆ ಸುಧಾರಣೆಗೆ ನೂತನ ಅಧ್ಯಕ್ಷ-ಉಪಾಧ್ಯಕ್ಷರು ಮತ್ತು ಆಡಳಿತ ಮಂಡಳಿ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ನಾಮನಿರ್ದೇಶಿತ ಸದಸ್ಯ ಬಿ.ಎಸ್.ಅಕ್ಕಿವಳ್ಳಿ ಮಾತನಾಡಿದರು.
ನೂತನ ಅಧ್ಯಕ್ಷ ಸಿದ್ದಪ್ಪ ಬಂಗಾರೇರ ಹಾಗೂ ಉಪಾಧ್ಯಕ್ಷೆ ಗೀತಾ ಕೋರಿ ಮಾತನಾಡಿ, ನಮಗೆ ದೊರೆತ ಅವಕಾಶದಲ್ಲಿ ಪ್ರಾಮಾಣಿಕ ಹಾಗೂ ಪಾರದರ್ಶಕ ಆಡಳಿತದ ಮೂಲಕ ರೈತ ಸಮುದಾಯದ ಏಳ್ಗೆಗೆ ಬದ್ಧರಾಗಿ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.
ಬಿಜೆಪಿ ತಾಲೂಕು ಅಧ್ಯಕ್ಷ ರಾಜು ಗೌಳಿ, ಜಿಪಂ ಸದಸ್ಯ ಮಾಲತೇಶ ಸೊಪ್ಪಿನ, ಮಾಜಿ ಸದಸ್ಯ ಪದ್ಮನಾಭ ಕುಂದಾಪುರ, ಎಪಿಎಂಸಿ ಮಾಜಿ ಅಧ್ಯಕ್ಷರುಗಳಾದ ಶೇಕಣ್ಣ ಮಹರಾಜಪೇಟ, ಶಿವಯೋಗಿ ವಡೆಯರ, ಸದಸ್ಯರಾದ ರಾಜಣ್ಣ ಪಟ್ಟಣದ, ರಾಮಪ್ಪ ಮಾದಪ್ಪನವರ, ಸುಜಾತಾ ಪಸಾರದ, ಗುರುರಾಜ ನಿಂಗೋಜಿ, ನಾಗಪ್ಪ ಶಿವಣ್ಣನವರ, ಪರಸಪ್ಪ ಮಡಿವಾಳರ, ಬಿಜೆಪಿ ಕಾರ್ಯದರ್ಶಿ ಶಿವಲಿಂಗಪ್ಪ ತಲ್ಲೂರ, ನಿಂಗಪ್ಪ ಗೊಬ್ಬೇರ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಚಂದ್ರಣ್ಣ ಹರಿಜನ, ರವಿರಾಜ ಕಲಾಲ, ಎಪಿಎಂಸಿ ಕಾರ್ಯದರ್ಶಿ ಪಿ.ಎಂ.ಪರಮಶೆಟ್ಟಿ ಪಾಲ್ಗೊಂಡಿದ್ದರು.