ತುಮಕೂರು: ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಫೆ.12ರಿಂದ 26ರವರೆಗೆ ಸಿದ್ಧಗಂಗಾ ಮಠದಲ್ಲಿ ಕೃಷಿ ಮತ್ತು ವಸ್ತು ಪ್ರದರ್ಶನ ಆಯೋಜಿಸಲಾಗಿದೆ.
1964ರಲ್ಲಿ ಸಣ್ಣಮಟ್ಟದಲ್ಲಿ ಆರಂಭವಾದ ವಸ್ತು ಪ್ರದರ್ಶನ ಒಂದು ವರ್ಷ ಬರಗಾಲದಿಂದ ನಡೆದಿರಲಿಲ್ಲ. 55 ವರ್ಷಗಳಿಂದ ನಿರಂತರ ವಾಗಿ ನಡೆದುಕೊಂಡು ಬಂದಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಳಿಗೆಗಳು ಹಾಗೂ ವಿವಿಧ ಪ್ರಮುಖ ಸಂಸ್ಥೆಗಳ ಮಳಿಗೆಗಳೂ ಸೇರಿ ಒಟ್ಟು 160 ಮಳಿಗೆಗಳು ಭಾಗವಹಿಸಲಿವೆ. ಪೌರಾಣಿಕ, ಸಾಮಾಜಿಕ, ಐತಿಹಾಸಿಕ, ರಸಮಂಜರಿ ಹಾಗೂ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಅನುದಾನ ಬಿಡುಗಡೆ ನಿರೀಕ್ಷೆ: ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನಕ್ಕೆ ಕೈಗಾರಿಕಾ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಅನುದಾನ ನೀಡಲಾಗುತ್ತಿತ್ತು. ಆದರೆ, ಕಳೆದ ವರ್ಷ ಅನುದಾನ ನೀಡಿಲ್ಲ. ಈ ಬಾರಿ ಪ್ರಸ್ತಾವನೆ ಸಲ್ಲಿಸಿದ್ದು, ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ವಸ್ತು ಪ್ರದರ್ಶನ ಸಮಿತಿ ಜಂಟಿ ಕಾರ್ಯದರ್ಶಿ ಎಸ್.ಶಿವಕುಮಾರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕೆಂ.ಬ.ರೇಣುಕಯ್ಯ ಮತ್ತಿತರರು ಇದ್ದರು.
ಜಾತ್ರಾ ಮಹೋತ್ಸವ: ಸಿದ್ಧಗಂಗಾ ಮಠದ ಆರಾಧ್ಯದೈವ ಸಿದ್ದಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಶಿವರಾತ್ರಿ ಸಂದರ್ಭದಲ್ಲಿ ನಡೆಯಲಿದೆ. ಫೆ.15ರಿಂದ 24ರವರೆಗೆ 10 ದಿನಗಳ ಪ್ರತಿನಿತ್ಯ ಸ್ವಾಮಿ ಉತ್ಸವ ಜರುಗಲಿದೆ. ಫೆ.22 ರಂದು ಸಿದ್ದಲಿಂಗೇಶ್ವರ ಸ್ವಾಮಿ ರಥೋತ್ಸವ ನಡೆಯಲಿದೆ. ಫೆ.15 ಶ್ರೀ ಗೋಸಲಸಿದ್ದೇಶ್ವರ ಸ್ವಾಮಿ ಉತ್ಸವ, 21ಕ್ಕೆ ಮುತ್ತಿನಪಲ್ಲಕ್ಕಿ, 22ಕ್ಕೆ ಮಹಾರಥೋತ್ಸವ, 23ಕ್ಕೆ ಬೆಳ್ಳಿಪಲ್ಲಕ್ಕಿ ಉತ್ಸವ ಹಾಗೂ 24ರಂದು ತೆಪ್ಪೋತ್ಸವ ಇರುತ್ತದೆ.
ಈ ಬಾರಿ ವಸ್ತು ಪ್ರದರ್ಶನದಲ್ಲಿ ಜಿಲ್ಲಾ ಕಾರಾ ಗೃಹದ ವತಿಯಿಂದ ಮಳಿಗೆ ತೆರೆಯಲಿರುವುದು ವಿಶೇಷ. ವಿಚಾರಣಾಧೀನ ಖೈದಿಗಳು ತಯಾರಿಸಿರುವ ಉತ್ಪನ್ನಗಳ ಮಾರಾಟ ಹಾಗೂ ಪ್ರದರ್ಶನ ಇರಲಿದೆ. ವರ್ಷದಿಂದ ವರ್ಷಕ್ಕೆ ವಸ್ತು ಪ್ರದರ್ಶನ ಉತ್ತಮಗೊಳಿಸಲಾಗುತ್ತಿದೆ.
ಬಿ.ಗಂಗಾಧರಯ್ಯ
ಕಾರ್ಯದರ್ಶಿ, ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ