ಬೆಳ್ತಂಗಡಿ : ಸರ್ವಧರ್ಮ ಸಮನ್ವಯ ಕ್ಷೇತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಕಾರ್ತಿಕ ಮಾಸದ ಲಕ್ಷದೀಪೋತ್ಸವ ಗುರುವಾರ ರಾತ್ರಿ ಹೊಸಕಟ್ಟೆ ಉತ್ಸವದೊಂದಿಗೆ ಆರಂಭಗೊಂಡು ಐದು ದಿನ ನಡೆಯಲಿದ್ದು, ಕ್ಷೇತ್ರ ಸರ್ವಾಲಂಕೃತಗೊಂಡಿದೆ.
10ರಂದು ರಾತ್ರಿ 9ಕ್ಕೆ ಹೊಸಕಟ್ಟೆ ಉತ್ಸವ, 11ರಂದು ಕೆರೆಕಟ್ಟೆ ಉತ್ಸವ, 12ರಂದು ಲಲಿತೋದ್ಯಾನ ಉತ್ಸವ, 13ರಂದು ಕಂಚಿಮಾರುಕಟ್ಟೆ ಉತ್ಸವ, 14ರಂದು ಗೌರಿಮಾರುಕಟ್ಟೆ ಉತ್ಸವಗಳು ನಡೆಯಲಿವೆ. ದೀಪೋತ್ಸವ ಪ್ರಯುಕ್ತ 13 ಮತ್ತು 14ರಂದು 88ನೇ ವರ್ಷದ ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನಗಳು, 15ರಂದು ಸಂಜೆ 6.30ರಿಂದ ಮಹೋತ್ಸವ ಸಭಾಭವನದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜಾ ಕಾರ್ಯಕ್ರಮಗಳಿರುತ್ತವೆ.
ಆನ್ಲೈನ್ ವೀಕ್ಷಣೆಗೆ ವ್ಯವಸ್ಥೆ
ಧರ್ಮಸ್ಥಳ ಲಕ್ಷದೀಪೋತ್ಸವದ ಎಲ್ಲ ಧಾರ್ವಿುಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆನ್ಲೈನ್ (ನಮ್ಮ ಕುಡ್ಲ, ಶ್ರೀಶಂಕರ ಟಿವಿ, ಯೂಟ್ಯೂಬ್ ಮತ್ತು ಫೇಸ್ಬುಕ್) ಮೂಲಕ ನೇರ ವೀಕ್ಷಣೆ ಮಾಡಬಹುದಾಗಿದೆ. ಯೂಟ್ಯೂಬ್ ಮತ್ತು ಫೇಸ್ಬುಕ್ ಲಿಂಕ್: – www.youtube.com/c/SrikshetraDharmasthalaManjunatha
ಈ ಬಾರಿ ಕರೊನಾ ಹಿನ್ನೆಲೆಯಲ್ಲಿ ಸರಳ ದೀಪೋತ್ಸವ ನಡೆಸಲು ನಿರ್ಧರಿಸಲಾಗಿದೆ ಎಂದು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ತಿಳಿಸಿದ್ದಾರೆ. ಅದರಂತೆ ವಸ್ತು ಪ್ರದರ್ಶನ, ಮಾರಾಟ ಮಳಿಗೆಗಳು ಈ ಬಾರಿ ಇರುವುದಿಲ್ಲ. ಆದರೆ ಧಾರ್ವಿುಕ ಆಚರಣೆಗಳನ್ನು ಯಥಾ ಪ್ರಕಾರ ನಡೆಸಲಾಗುತ್ತಿದೆ. ಕ್ಷೇತ್ರದ ಮಹಾದ್ವಾರ, ದೇವಸ್ಥಾನ ಸಹಿತ ಪ್ರಮುಖ ಕಟ್ಟಡಗಳನ್ನು ವಿದ್ಯುದ್ದೀಪಾಲಂಕಾರ ಮಾಡಲಾಗಿದ್ದು, ಲಕ್ಷದೀಪೋತ್ಸವ ಆಚರಣೆಗೆ ಸಕಲ ಸಿದ್ಧತೆ ನಡೆದಿದೆ.
ಸಮ್ಮೇಳನಗಳು: 13ರಂದು ಸಂಜೆ 5.30ರಿಂದ ಅಮೃತವರ್ಷಿಣಿ ಸಭಾಭವನದಲ್ಲಿ ಸರ್ವಧರ್ಮ ಸಮ್ಮೇಳನ ನಡೆಯಲಿದ್ದು, ವಸತಿ ಸಚಿವ ವಿ.ಸೋಮಣ್ಣ ಉದ್ಘಾಟಿಸಲಿದ್ದಾರೆ. ಶ್ರೀಕ್ಷೇತ್ರ ಕನಕಗಿರಿ ಜೈನಮಠದ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮಿಜಿ ಅಧ್ಯಕ್ಷತೆ ವಹಿಸುವರು. ಬೆಂಗಳೂರು ಸೃಷ್ಟಿ ಮಣಿಪಾಲ್ ಇನ್ಸಿಟಿಟ್ಯೂಟ್ (ಎಸ್.ಎಂ.ಐ)ಇದರ ಬೋಧಕ ಮತ್ತು ಖ್ಯಾತ ಕಥೆಗಾರ ಕೇಶವ ಮುಳಗಿ, ಉಡುಪಿ ಕ್ಯಾಥೊಲಿಕ್ ಕ್ರೖೆಸ್ತ ಧರ್ಮಪ್ರಾಂತ್ಯದ ಬಿಷಪ್ ಹೌಸ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಚೇತನ್ ಲೋಬೊ ಉಪನ್ಯಾಸ ನೀಡಲಿದ್ದಾರೆ.
14ರಂದು ಸಂಜೆ 5.30ಕ್ಕೆ ಸಾಹಿತ್ಯ ಸಮ್ಮೇಳನವನ್ನು ಬೆಂಗಳೂರಿನ ವಿಶ್ರಾಂತ ಪ್ರಾಧ್ಯಾಪಕ ಡಾ.ಎಸ್. ರಂಗನಾಥ್ ಉದ್ಘಾಟಿಸಲಿದ್ದು, ಸಾಹಿತಿ, ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಮೈಸೂರು ಪ್ರಾಧ್ಯಾಪಕ ಡಾ.ಜ್ಯೋತಿ ಶಂಕರ್, ಮೂಡುಬಿದಿರೆ ವಿಶ್ರಾಂತ ಉಪನ್ಯಾಸಕ, ಇತಿಹಾಸ ಸಂಶೋಧಕ ಡಾ.ಪುಂಡಿಕಾೖ ಗಣಪಯ್ಯ ಭಟ್ ಉಪನ್ಯಾಸ ನೀಡಲಿದ್ದಾರೆ. ಅಮೃತವರ್ಷಿಣಿ ಸಭಾಭವನದಲ್ಲಿ 12ರಿಂದ 14ರವರೆಗೆ ಪ್ರತಿದಿನ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಇಂದು ಪಾದಯಾತ್ರೆ : ದೀಪೋತ್ಸವ ಪ್ರಯುಕ್ತ ಗುರುವಾರ ಅಪರಾಹ್ನ ಉಜಿರೆಯಿಂದ ಧರ್ಮಸ್ಥಳದವರೆಗೆ ಕ್ಷೇತ್ರದ ಭಕ್ತಾಭಿಮಾನಿಗಳು, ವಿವಿಧ ಸಂಘ ಸಂಸ್ಥೆಗಳು, ಸಮಾನ ಮನಸ್ಕರಿಂದ 8ನೇ ವರ್ಷದ ಪಾದಯಾತ್ರೆ ನಡೆಯಲಿದೆ. ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಧ್ವಜಸ್ತಂಭದ ಬಳಿ ಅಪರಾಹ್ನ 3 ಗಂಟೆಗೆ ಪಾದಯಾತ್ರೆ ಆರಂಭಗೊಳ್ಳಲಿದೆ. ಕರೊನಾ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಕಾರ್ಯಕ್ರಮ ನಡೆಯಲಿದೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಹೊಸ ನೇಮಕಾತಿಗೆ ಆತ್ಮನಿರ್ಭರ ಭಾರತ್ ರೋಜ್ಗಾರ್ ಯೋಜನೆ ನೆರವು: 23,000 ಕೋಟಿ ರೂಪಾಯಿ ಮೀಸಲು