ಜೈಪುರ: ರಾಜಸ್ಥಾನ ರಾಜಕೀಯ ಅಸ್ಥಿರವಾಗಿ ಮುಂದುವರಿದಿದ್ದು, ಆಗಸ್ಟ್ 14ರಿಂದ ವಿಧಾನಸಭೆ ಅಧಿವೇಶನ ಶುರುವಾಗಲಿದೆ. ಅಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ವಿಶ್ವಾಸ ಮತ ಯಾಚಿಸಲು ಸಜ್ಜಾಗುತ್ತಿದ್ದಾರೆ. ಅದಕ್ಕೂ ಮುನ್ನ ಜೈಸಲ್ಮೇರ್ನ ರೆಸಾರ್ಟ್ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಮ್ಮ ಒಗ್ಗಟ್ಟನ್ನು ವಿಶ್ವಾಸ ಮತದ ಸಂದರ್ಭದಲ್ಲಿ ಪ್ರದರ್ಶಿಸಿ ಎಂದು ಶಾಸಕರಿಗೆ ಕರೆ ನೀಡಿದ್ದಾರೆ.
ನಾವು ಡೆಮಾಕ್ರಸಿಯ ವಾರಿಯರ್ಸ್. ಈ ಯುದ್ಧವನ್ನು ನಾವು ಗೆಲ್ಲಲಿದ್ದೇವೆ. ಅದೇ ರೀತಿ ಇನ್ನು ಮೂರೂವರೆ ವರ್ಷ ನಂತರ ಎದುರಾಗುವ ವಿಧಾನಸಭೆ ಚುನಾವಣೆಯನ್ನೂ ಗೆಲ್ಲಲಿದ್ದೇವೆ. ಇದುವರೆಗೆ ನೀವು ತೋರಿಸಿದ ಒಗ್ಗಟ್ಟು ಏನಿದೆಯೋ ಅದನ್ನು ಸದನದಲ್ಲೂ ಪ್ರದರ್ಶಿಸಬೇಕು ಎಂದು ಗೆಹ್ಲೋಟ್ ಹೇಳಿದ್ದಾರೆ. ಈ ಸಭೆಯಲ್ಲಿ ಕಾಂಗ್ರೆಸ್ ನಾಯಕರಾದ ಅಜಯ್ ಮಾಕೆನ್, ರಣದೀಪ್ ಸುರ್ಜೇವಾಲ, ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ಸಿಂಗ್ ದೋತಸ್ರ ಅವರು ಹಾಜರಿದ್ದರು.
ಇದನ್ನೂ ಓದಿ: ರಾಜಸ್ಥಾನ ರಾಜಕೀಯ: ಮೌನ ಮುರಿದ ರಾಹುಲ್ ಗಾಂಧಿ!
ಉಪಮುಖ್ಯಮಂತ್ರಿಯಾಗಿದ್ದ ಸಚಿನ್ ಪೈಲಟ್ ಮತ್ತು ಸಂಗಡಿಗರು ಬಂಡಾಯದ ಬಾವುಟ ಹಾರಿಸಿದ್ದರಿಂದಾಗಿ ರಾಜಸ್ಥಾನದಲ್ಲಿ ಆಡಳಿತಾರೂಡ ಕಾಂಗ್ರೆಸ್ ಪಾಳಯದಲ್ಲಿ ತಲ್ಲಣ ಸೃಷ್ಟಿಯಾಗಿದೆ. ಗೆಹ್ಲೋಟ್ ಸರ್ಕಾರ ಪತನ ಭೀತಿಯನ್ನು ಎದುರಿಸುತ್ತಿದೆ. ಈ ನಡುವೆ, ಪೈಲಟ್ ಮತ್ತು ಅವರಿಗೆ ನಿಷ್ಠ 18 ಶಾಸಕರನ್ನು ಅನರ್ಹಗೊಳಿಸುವ ಪ್ರಕ್ರಿಯೆಯೂ ನಡೆದಿದೆ. ಇದರ ಜತೆಜತೆಗೆ ಉಳಿದ ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್ನಲ್ಲಿ ಇರಿಸಿಕೊಂಡಿರುವ ಗೆಹ್ಲೋಟ್, ಸರ್ಕಾರ ಉಳಿಸಲು ಶತಾಯ ಗತಾಯ ಪ್ರಯತ್ನಿಸುತ್ತಿದ್ದಾರೆ. (ಏಜೆನ್ಸೀಸ್)
ರಾಜಸ್ಥಾನ ರಾಜಕೀಯ: ಪಕ್ಷಗಳ ವಿಲೀನ ಒಕೆ, ಶಾಸಕರ ವಿಲೀನಕ್ಕೆಲ್ಲಿ ಅವಕಾಶ- ಬಿಎಸ್ಪಿ ಪ್ರಶ್ನೆ