ಎಂ.ಕೆ.ಹುಬ್ಬಳ್ಳಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬಹುಜನ ಕ್ರಾಂತಿ ಮೋರ್ಚಾ ಸಮಿತಿಯಿಂದ ಬುಧವಾರ ಕರೆ ನೀಡಲಾಗಿದ್ದ ಭಾರತ ಬಂದ್ಗೆ ಎಂ.ಕೆ.ಹುಬ್ಬಳ್ಳಿಯಲ್ಲಿ ಮುಸ್ಲಿಂ ಸಮುದಾಯದಿಂದ ಬೆಂಬಲ ವ್ಯಕ್ತವಾಗಿದೆ.
ಪಟ್ಟಣದ ಮುಸ್ಲಿಂ ಸಮುದಾಯದ ಜನರು ತಮ್ಮ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಬಂದ್ಗೆ ಬೆಂಬಲ ವ್ಯಕ್ತಪಡಿಸಿದರು. ಪಟ್ಟಣದ ಪ್ರಮುಖ ರಸ್ತೆಗಳ ಪಕ್ಕದ ಕೆಲ ಗೋಡೆ, ಅಂಗಡಿಗಳಿಗೆ ಜ.28ರಂದು ಭಾರತ ಬಂದ್ ಎಂಬ ಕರ ಪತ್ರಗಳನ್ನು ಅಂಟಿಸಲಾಗಿತ್ತು. ಸಿಎಎ, ಎನ್ಆರ್ಸಿ ಮತ್ತು ಇವಿಎಂ ರದ್ದು ಮಾಡಬೇಕು.
ಡಿಎನ್ಎ ಆಧಾರಿತ ಎನ್ಆರ್ಸಿ ಜಾರಿ ಮಾಡಬೇಕೆಂದು ಗೋಡೆಗಳಿಗೆ ಅಂಟಿಸಲಾಗಿದ್ದ ಭೀತಿ ಪತ್ರಗಳಲ್ಲಿ ಬರೆಯಲಾಗಿತ್ತು. ಪೌರತ್ವ ಕಾಯ್ದೆ ವಿರೋಧಿಸಿ ಪಟ್ಟಣದ ಮುಸ್ಲಿಂ ಸಮುದಾಯದ ಜನರು ಅಂಗಡಿ ಮುಚ್ಚಿದ್ದರೆ, ಇನ್ನುಳಿದ ಅಂಗಡಿ-ಮುಂಗಟ್ಟುಗಳು ಎಂದಿನಂತೆ ತೆರೆದಿದ್ದವು. ಇದರಿಂದ ಪಟ್ಟಣದ ಜನತೆಗೆ ಬಂದ್ ಬಿಸಿ ತಟ್ಟಲಿಲ್ಲ. ಶಾಲಾ-ಕಾಲೇಜು ಸೇರಿ, ಬ್ಯಾಂಕ್ ಮತ್ತಿತರ ಸಂಘ-ಸಂಸ್ಥೆಗಳು ಸಹ ಎಂದಿನಂತೆ ಕಾರ್ಯನಿರ್ವಹಿಸಿದವು.