ಬೆಂಗಳೂರು: ಗಿರಿಜನ ಸಮುದಾಯದ ಜಸ್ಕೌರ್ ಮೀನಾ ಜತೆ ಅನುಚಿತವಾಗಿ ವರ್ತಿಸಿದ ಕಾಂಗ್ರೆಸ್ನ ಸಂಸದರನ್ನು ಲೋಕಸಭೆಯಿಂದ ಉಚ್ಚಾಟಿಸುವಂತೆ ಲೋಕಸಭಾ ಸ್ಪೀಕರ್ಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸದಸ್ಯೆ ಶೋಭಾ ಕರಂದ್ಲಾಜೆ ಲಿಖಿತ ದೂರು ಸಲ್ಲಿಸಿದ್ದಾರೆ.
ಸಂಸತ್ನ ಶಿಸ್ತು, ನಿಯಮಾವಳಿಗೆ ವಿರುದ್ಧವಾಗಿ ಕಾಂಗ್ರೆಸ್ ಸಂಸದರು ನಡೆದುಕೊಂಡಿದ್ದಾರೆ. ಈ ಹಿಂದೆಯೂ ಪ್ರತಿಪಕ್ಷದ ಮಹಿಳಾ ಸಂಸದರೊಬ್ಬರು ಪರಿಶಿಷ್ಟ ಜಾತಿಯ ಬಿಜೆಪಿ ಎಂಪಿಯನ್ನು ತಳ್ಳಾಡಿ ಪ್ರಚೋದಿಸಲು ಪ್ರಯತ್ನಿಸಿದ್ದರು ಎಂದು ಕರಂದ್ಲಾಜೆ ದೂರಿನಲ್ಲಿ ಸ್ಪೀಕರ್ ಗಮನ ಸೆಳೆದಿದ್ದಾರೆ.
ನ್ಯಾಯೋಚಿತವಲ್ಲದ ಈ ನಡೆಗಳನ್ನು ಖಂಡಿಸುತ್ತಲೇ ಬಂದಿರುವೆ. ಆದರೂ, ಕಲಾಪಗಳಲ್ಲಿ ಚರ್ಚೆ ಆಶಯಕ್ಕೆ ಪದೇಪದೆ ಭಂಗ ಉಂಟು ಮಾಡುವುದಲ್ಲದೆ, ಅನುಚಿತವಾಗಿ ವರ್ತಿಸುತ್ತಿರುವ ಇಂತಹ ಸದಸ್ಯರನ್ನು ಲೋಕಸಭೆಯಿಂದ ಕೂಡಲೇ ಉಚ್ಚಾಟಿಸಬೇಕು ಎಂದು ಶೋಭಾ ಕರಂದ್ಲಾಜೆ ಮನವಿ ಮಾಡಿದ್ದಾರೆ.