ಶಿವಮೊಗ್ಗ: ನಟ ದರ್ಶನ್ ಅಭಿನಯದ ಬಹು ನಿರೀಕ್ಷಿತ ‘ರಾಬರ್ಟ್’ ಸಿನಿಮಾ ಶಿವರಾತ್ರಿ ದಿನವಾದ ಗುರುವಾರ ತೆರೆಕಂಡಿದ್ದು ಮಲೆನಾಡು ಶಿವಮೊಗ್ಗದಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಬೆಳಗಿನ ಜಾವದಿಂದಲೇ ಅಭಿಮಾನಿಗಳು ಮುಗಿಬಿದು ಟಿಕೆಟ್ ಖರೀದಿಸಿದರು.
ಚಿತ್ರ ಬಿಡುಗಡೆಗೆ ಬುಧವಾರ ಸಂಜೆಯೇ ನಟ ದರ್ಶನ್ ಅವರ ಕಟೌಟ್ಗಳು, ಬ್ಯಾನರ್, ಫ್ಲೆಕ್ಸ್ಗಳು ಚಿತ್ರಮಂದಿರಗಳ ಎದುರು ರಾಜಾಜಿಸುತ್ತಿದ್ದವು. ಚಿತ್ರ ಪ್ರದರ್ಶನಕ್ಕೂ ಮುನ್ನವೇ ಮಧ್ಯರಾತ್ರಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಹೂವು, ಹಾಲಿನ ಅಭಿಷೇಕವನ್ನೂ ಮಾಡಿದರು.
ನಗರದ ವೀರಭದ್ರೇಶ್ವರ, ಮಲ್ಲಿಕಾರ್ಜುನ, ಮಂಜುನಾಥ ಚಿತ್ರಮಂದಿರಗಳು ಹಾಗೂ ಭಾರತ್ ಸಿನಿಮಾಸ್ನಲ್ಲಿಯೂ ರಾಬರ್ಟ್ ಅಲೆ ಜೋರಾಗಿತ್ತು. ಭಾರತ್ ಸಿನಿಮಾಸ್ನಲ್ಲಿ ಟಿಕೆಟ್ಗಳು ಎರಡು ದಿನ ಮುಂಚಿತವಾಗಿಯೇ ಬುಕ್ಕಿಂಗ್ ಆಗಿದ್ದು ವಿಶೇಷವಾಗಿತ್ತು.
ಕರೊನಾತಂಕದ ನಡುವೆಯೂ ತಮ್ಮ ನೆಚ್ಚಿನ ನಟನ ಸಿನಿಮಾಕ್ಕೆ ಡೊಳ್ಳು ಕುಣಿತ, ಕಟೌಟ್ಗಳಿಗೆ ಹೂವಿನ ಹಾರ, ಹಾಲಿನ ಅಭಿಷೇಕ ಮಾಡಿ ಅಭಿಮಾನ ಮೆರೆದರು. ವೀರಭದ್ರೇಶ್ವರ ಟಾಕೀಸ್ ಬಳಿ ಬೆಳಗಿನ ಜಾವ 3 ಗಂಟೆಯಿಂದಲೇ ಟಿಕೆಟ್ಗೆ ಅಭಿಮಾನಿಗಳು ಕಾದು ನಿಂತಿದ್ದರು.