More

    ಪೊಲೀಸ್ ತುರ್ತು ಸ್ಪಂದನ ಸಹಾಯ ವ್ಯವಸ್ಥೆ ಡಯಲ್ 112ಕ್ಕೆ ಚಾಲನೆ

    ಶಿವಮೊಗ್ಗ: ನೀವು ಅಸುರಕ್ಷಿತವಾಗಿದ್ದಿರಾ.. ತುರ್ತು ನೆರವಿನ ಅಗತ್ಯವಿದೆಯಾ .. ಹಾಗಾದ್ರೆ ಇನ್ಮುಂದೆ 112 ಕರೆ ಮಾಡಿ ಸಾಕು.. ನೀವಿರುವ ಸ್ಥಳಕ್ಕೆ ಬರಲಿದೆ ತುರ್ತು ಸ್ಪಂದನ ಪೊಲೀಸರು..

    ಹೌದು, ಇಂತಹದೊಂದು ವ್ಯವಸ್ಥೆಯನ್ನ ಪೊಲೀಸ್ ಇಲಾಖೆ ಜಾರಿಗೊಳಿಸಿದ್ಸು, ತುರ್ತು ಸಂದರ್ಭಗಳಲ್ಲಿ ಪೊಲೀಸರಿಗೆ ಕರೆ ಮಾಡಿ ತಕ್ಷಣ ಸೇವೆಯನ್ನು ಪಡೆಯುವ ಉದ್ದೇಶದಿಂದ ಆರಂಭಿಸಲಾಗಿರುವ ಡಯಲ್-112 ಪೊಲೀಸ್ ತುರ್ತು ಸ್ಪಂದನ ಸಹಾಯ ವ್ಯವಸ್ಥೆಗೆ ಪೂರ್ವ ವಲಯ ಐಜಿಪಿ ರವಿ ಅವರು ಸೋಮವಾರ ಚಾಲನೆ ನೀಡಿದರು.

    ಬಳಿಕ ಮಾತನಾಡಿದ ಅವರು, ಪ್ರಸ್ತುತ ಯಾವುದೇ ಪೊಲೀಸ್ ಸೇವೆ ಮತ್ತು ಅಗ್ನಿ ಅನಾಹುತ ಸೇವೆಗಳಿಗೆ ಈ ದೂರವಾಣಿ ಸಂಖ್ಯೆಗೆ ಸಾರ್ವಜನಿಕರು ಕರೆ ಮಾಡಬಹುದಾಗಿದೆ ಎಂದರು.

    ಸಾರ್ವಜನಿಕರ ದೂರಿಗೆ ತಕ್ಷಣ ಸ್ಪಂದಿಸುವ ಉದ್ದೇಶದಿಂದ ಈ ಸೇವೆಯನ್ನು ಆರಂಭಿಸಲಾಗಿದ್ದು, ತೊಂದರೆಯಲ್ಲಿರುವ ಸಾರ್ವಜನಿಕರು 112 ಸಂಖ್ಯೆಗೆ ಕರೆ ಮಾಡಬೇಕು. ಕರೆಯನ್ನು ಸ್ವೀಕರಿಸಿದ ಕೇಂದ್ರದಲ್ಲಿ ಅಗತ್ಯ ವಿವರಗಳನ್ನು ಪಡೆದುಕೊಳ್ಳಲಾಗುವುದು. ಎಲ್ಲಾ ವಾಹನಗಳಲ್ಲಿ ಜಿಪಿಎಸ್ ವ್ಯವಸ್ಥೆ ಇದ್ದು, ಕರೆಯನ್ನು ಸ್ವೀಕರಿಸಿದ ಸ್ಥಳಕ್ಕೆ ಹತ್ತಿರದಲ್ಲಿರುವ ತುರ್ತು ಸೇವಾ ವಾಹನಕ್ಕೆ ಸಂದೇಶವನ್ನು ರವಾನಿಸಿ ಘಟನಾ ಸ್ಥಳಕ್ಕೆ ಕಳುಹಿಸಲಾಗುವುದು. ವಾಹನ ಆಗಮಿಸುತ್ತಿರುವ ಬಗ್ಗೆ ಮಾಹಿತಿಯನ್ನು ದೂರವಾಣಿ ಮಾಡಿದವರಿಗೆ ಎಸ್‍ಎಂಎಸ್ ಮೂಲಕ ನೀಡಲಾಗುವುದು ಎಂದು ಹೇಳಿದರು.

    ಪ್ರತಿ ವಾಹನದಲ್ಲಿ ಒಬ್ಬರು ಅಧಿಕಾರಿ ಮತ್ತು ಸಿಬ್ಬಂದಿ ಇದ್ದು, ಘಟನಾ ಸ್ಥಳಕ್ಕೆ ತಕ್ಷಣ ತೆರಳಿ ಕ್ರಮ ಜರುಗಿಸಲು ಇದರಿಂದ ಸಾಧ್ಯವಾಗಲಿದೆ. ಮುಂದಿನ ದಿನಗಳಲ್ಲಿ ಅಂಬುಲೆನ್ಸ್ ಸೇವೆಯನ್ನು ಸಹ ಇದರಡಿ ತರಲಾಗುವುದು. ಇದುವರೆಗೆ ಪೊಲೀಸ್ ಠಾಣೆ ಇಲ್ಲದ ಕಡೆಗಳಲ್ಲಿ ಪೊಲೀಸ್ ಹೊರಠಾಣೆಯನ್ನು ಸ್ಥಾಪಿಸಲಾಗುತ್ತಿತ್ತು. ಡಯಲ್-112 ಮೊಬೈಲ್ ಹೊರಠಾಣೆಯಾಗಿ ಕಾರ್ಯನಿರ್ವಹಿಸಲಿದೆ. ಯಾವುದೇ ರೀತಿಯ ಅಪರಾಧ ಕೃತ್ಯಗಳು ಅಥವಾ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಘಟನೆಗಳು ನಡೆದ ತಕ್ಷಣ ಸಾರ್ವಜನಿಕರು ಇನ್ನು ಮುಂದೆ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿಯನ್ನು ನೀಡಬೇಕು. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.

    ಎಸ್ಪಿ ಕೆ.ಎಂ.ಶಾಂತರಾಜು ಮಾತನಾಡಿ, ಜಿಲ್ಲೆಗೆ 18 ತುರ್ತು ಸ್ಪಂದನ ವಾಹನಗಳನ್ನು ನೀಡಲಾಗಿದೆ. ಶಿವಮೊಗ್ಗ ಉಪವಿಭಾಗದಲ್ಲಿ 6, ಭದ್ರಾವತಿ, ಸಾಗರ, ಶಿಕಾರಿಪುರ, ತೀರ್ಥಹಳ್ಳಿ ಉಪವಿಭಾಗಗಳಲ್ಲಿ ತಲಾ 3 ವಾಹನಗಳನ್ನು ಒದಗಿಸಲಾಗಿದೆ. 112 ಆಪ್ ಸಹ ಅಭಿವೃದ್ಧಿಪಡಿಸಿದ್ದು, ಟ್ವಿಟರ್ ಹ್ಯಾಂಡಲ್ ಸಿದ್ಧಪಡಿಸಲಾಗುವುದು. ನಗರ ಮತ್ತು ತಾಲೂಕು ವ್ಯಾಪ್ತಿಯಲ್ಲಿ ಡಯಲ್ 112 ಯೋಜನೆ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ನೆರವಾಗಲಿದೆ ಎಂದು ಹೇಳಿದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts