ಶಿವಮೊಗ್ಗ: ರಾಜ್ಯದಲ್ಲಿ ಪ್ರಸ್ತುತ ಕಾಂಗ್ರೆಸ್ ಪರವಾದ ಅಲೆಯಿದೆ. ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುವ ಅವಕಾಶ ನಮಗಿದೆ. ಹೀಗಾಗಿ ಕಾರ್ಯಕರ್ತರು ಮನಸ್ತಾಪ ಮರೆತು ಒಗ್ಗೂಡಿ ಕೆಲಸ ಮಾಡಬೇಕೆಂದು ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿದರು.
ಬುಧವಾರ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಂ ಪಾಷಾ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಕೆಲ ದಿನಗಳ ಹಿಂದಷ್ಟೇ ಉತ್ತರ ಬ್ಲಾಕ್ ಅಧ್ಯಕ್ಷರು ಅಧಿಕಾರ ಸ್ವೀಕರಿಸಿದ್ದರು. ಈಗ ದಕ್ಷಿಣ ಬ್ಲಾಕ್ ಕಾಂಗ್ರೆಸ್ಗೂ ಸಾರಥ್ಯ ಸಿಕ್ಕಿದೆ. ಅನಿವಾರ್ಯ ಕಾರಣದಿಂದ ಅಧ್ಯಕ್ಷರ ನೇಮಕದಲ್ಲಿ ವಿಳಂಬವಾಗಿದೆ ಎಂದರು.
ಕೆಲ ತಿಂಗಳಲ್ಲೇ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಲಿದೆ. ಹೀಗಾಗಿ ಬ್ಲಾಕ್ ಅಧ್ಯಕ್ಷರ ಜವಾಬ್ದಾರಿ ಹೆಚ್ಚಿದೆ. ಬ್ಲಾಕ್ ಅಧ್ಯಕ್ಷರು ಶೀಘ್ರದಲ್ಲೇ 16 ಜನರನ್ನೊಳಗೊಂಡ ವಾರ್ಡ್ ಮತ್ತು 25 ಮಂದಿಯನ್ನು ಹೊಂದಿರುವ ಬೂತ್ ಸಮಿತಿ ರಚನೆ ಮಾಡಬೇಕು. ಪಕ್ಷದ ಅಭ್ಯರ್ಥಿ ಯಾರೇ ಆಗಿದ್ದರೂ ಸಂಘಟನಾತ್ಮಕವಾಗಿ ಕೆಲಸ ಮಾಡಬೇಕೆಂದು ಸೂಚನೆ ನೀಡಿದರು.
ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿ, ಹಿಂದಿನಂತೆ ಎಲ್ಲೋ ಕುಳಿತು ಬೂತ್, ವಾರ್ಡ್ ಸಮಿತಿ ರಚಿಸುವ ಪರಿಪಾಠ ಈಗ ನಡೆಯುವುದಿಲ್ಲ. ಪಕ್ಷದ ನಾಯಕರು ಎಲ್ಲದರ ಮಾಹಿತಿ ಪಡೆಯುತ್ತಾರೆ. ಎಲ್ಲವೂ ಪಕ್ಷದ ಸೂಚನೆಯಂತೇ ನಡೆಯಬೇಕೆಂದು ಹೇಳಿದರು.
ಕಾಂಗ್ರೆಸ್ಗೆ ಸುದೀರ್ಘ ಇತಿಹಾಸವಿದೆ. ದೇಶದ ನಾಗರಿಕರಿಗೆ ಒಳಿತು ಮಾಡುವ ಉದ್ದೇಶದಿಂದ ಪಕ್ಷ ಸ್ಥಾಪನೆಯಾಗಿತ್ತು. ಅದೇ ಧ್ಯೇಯವನ್ನು ಈಗಲೂ ಹೊಂದಿದ್ದೇವೆ. ಕಾರ್ಯಕರ್ತರು ನಾಗರೀಕರ ಹಿತ ಕಾಪಾಡುವ ಕೆಲಸ ಮಾಡಬೇಕೆಂದರು.
ಉತ್ತರ ಬ್ಲಾಕ್ ಅಧ್ಯಕ್ಷ ದೀಪಕ್ ಸಿಂಗ್, ನಗರ ಪಾಲಿಕೆ ಪ್ರತಿಪಕ್ಷ ನಾಯಕಿ ರೇಖಾ ರಂಗನಾಥ್, ಸದಸ್ಯ ಎಚ್.ಸಿ.ಯೋಗೇಶ್, ಮಾಜಿ ಮೇಯರ್ ಎಸ್.ಕೆ.ಮರಿಯಪ್ಪ, ಪ್ರಮುಖರಾದ ಎನ್.ರಮೇಶ್, ಚಂದ್ರಭೂಪಾಲ, ಇಸ್ಮಾಯಿಲ್ ಖಾನ್, ಎಚ್.ಪಿ.ಗಿರೀಶ್, ಇಕ್ಕೇರಿ ರಮೇಶ್ ಮುಂತಾದವರಿದ್ದರು.