ಶಿವಮೊಗ್ಗ: ಹೊಸ ವರ್ಷಾಚರಣೆ ಮಾಡದಂತೆ ನಿಷೇಧ ಹೇರಿರುವ ರಾಜ್ಯ ಸರ್ಕಾರ ಆದೇಶದ ಹಿಂದೆ ಆರ್ಎಸ್ಎಸ್ನ ಪಿತೂರಿ ಇದೆ ಎಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಆರೋಪ ಮಾಡಿದರು.
ಯುವಕರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನವನ್ನು ಸರ್ಕಾರ ಮಾಡಿರುವುದು ಖಂಡನೀಯ. ಕ್ರಿಸ್ಮಸ್ ಹಾಗೂ ಹೊಸ ವರ್ಷ ಆಚರಣೆ ಮಾಡಿದಂತೆ ಸರ್ಕಾರ ಮೇಲೆ ಆರ್ಎಸ್ಎಸ್ ಒತ್ತಡ ಹಾಕಿದೆ ಎಂದು ಸೋಮವಾರ ಸುದ್ದಿಗೊಷ್ಠಿಯಲ್ಲಿ ದೂರಿದರು.
ಯುವಪೀಳಿಗೆಯ ಸಂತೋಷ ಸಂಭ್ರಮದ ಕ್ಷಣವನ್ನು ಕಸಿದುಕೊಳ್ಳುವ ಹಕ್ಕು ಸರ್ಕಾರಕ್ಕಿಲ್ಲ. ವರ್ಷಾಚರಣೆಗೆ ಕರೊನಾ ನೆಪವೊಡ್ಡುವ ಸರ್ಕಾರ ಆರ್ಆರ್ ನಗರ ಉಪ ಚುನಾವಣೆ ಪ್ರಚಾರ ಮತ್ತು ವಿಜಯೋತ್ಸವದ ವೇಳೆ 15ರಿಂದ 20 ಸಾವಿರ ಜನರನ್ನು ಒಂದೆಡೆ ಸೇರಿಸಿತ್ತು. ಆಗ ಕರೊನಾ ಭಯ ಇರಲಿಲ್ಲವೇ. ಹೊಸ ವರ್ಷಾಚರಣೆಗೆ ಯಾಕೆ ಈ ನಿರ್ಬಂಧ ಎಂದು ಪ್ರಶ್ನಿಸಿದರು.
ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ತಕ್ಷಣವೇ ತಮ್ಮ ನಿರ್ಧಾರ ಬದಲಿಸಬೇಕು. ಸಾಮಾಜಿಕ ಅಂತರ ಮತ್ತು ಮಾಸ್ಕ್ನ್ನು ಕಡ್ಡಾಯಗೊಳಿಸಿ ವರ್ಷಾಚರಣೆಗೆ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದ ಅವರು, ತಜ್ಞರ ಅನುಮತಿ ಪಡೆದು ನೈಟ್ಕರ್ಫ್ಯೂ ಹಾಕಲಾಗುತ್ತಿದೆ ಎಂದಿದ್ದರು. ಆದರೆ ಮರುದಿನವೇ ನೈಟ್ಕರ್ಫ್ಯೂ ರದ್ದು ಮಾಡಿದರು. ಹಾಗಾದರೆ ತಜ್ಞರ ಸಮಿತಿಗೆ ಬೆಲೆ ಇಲ್ಲವಾ ಎಂದು ಪ್ರಶ್ನಿಸಿದರು. ಅಲ್ಲದೆ, ಲಂಡನ್ನಿಂದ ಭಾರತಕ್ಕೆ ಸಾವಿರಾರು ಜನರು ಬಂದಿದ್ದರೂ ಕೇವಲ 130 ಎಂದು ಅಂಕಿ ಅಂಶ ನೀಡುತ್ತಿದೆ ಎಂದು ದೂರಿದರು.
ಮುಖ್ಯಮಂತ್ರಿಗಳಿಗೆ ಅಹವಾಲು ಸಲ್ಲಿಸಬೇಕೆಂದಿದ್ದೀರಾ.. ಇನ್ಮೇಲೆ ಇದೊಂದಕ್ಕೇ ಇ-ಮೇಲ್ ಮಾಡಿದರೆ ಸಾಕು..