ಪಿರಿಯಾಪಟ್ಟಣ: ತಾಲೂಕಿನ ಕೋಗಿಲವಾಡಿ ಬಳಿ ಇರುವ ಮಾವುಕಲ್ಲೇಶ್ವರಬೆಟ್ಟದ ಮೇಲಿನ ಶಿವನ ಭಗ್ನಗೊಳಿಸಿರುವುದು ಬುಧವಾರ ಪತ್ತೆಯಾಗಿದೆ.
ಪ್ರತಿವರ್ಷ ಮುಂಗಾರಿನ ಆರಂಭದಲ್ಲಿ ಗ್ರಾಮೀಣ ಜನರು ಐತಿಹಾಸಿಕ ಮಾವುಕಲ್ಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಮಳೆಗಾಗಿ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ದೇವಾಲಯದಲ್ಲಿ ನಿಧಿ ಇದೆ ಎಂದು ಭಾವಿಸಿ ಕಳ್ಳರು ಈ ದೇವಾಲಯಕ್ಕೆ ನುಗ್ಗಿ ಶಿವಲಿಂಗವನ್ನು ಧ್ವಂಸ ಮಾಡಿದ್ದಾರೆ.
ಶಿವರಾತ್ರಿಯ ಮುನ್ನ ಈ ದೇವಾಲಯಕ್ಕೆ ಸುಣ್ಣಬಣ್ಣ ಬಳಿಯುವುದು ಇಲ್ಲಿನ ಜನರ ಸಂಪ್ರದಾಯ. ಬುಧವಾರ ಬೆಳಗ್ಗೆ ಪಿರಿಯಾಪಟ್ಟಣದ ಬೇಗೂರು ಗ್ರಾಮದ ವಿಜಯ್ ಎಂಬುವರು ದೇವಾಲಯಕ್ಕೆ ಭೇಟಿ ನೀಡಿದಾಗ ಶಿವಲಿಂಗ ಭಗ್ನಗೊಂಡಿರುವುದು ಬೆಳಕಿಗೆ ಬಂದಿದೆ. ಬಳಿಕ ಈ ವಿಷಯವನ್ನು ಕೋಗಿಲವಾಡಿ ಹಾಗೂ ಸುತ್ತಮುತ್ತಲ ಗ್ರಾಮದ ಜನರಿಗೆ ತಿಳಿಸಿದ್ದಾರೆ. ಕೂಡಲೇ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದರು. ಕೃತ್ಯದ ಕುರಿತು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ ಎಂದು ಪಿಎಸ್ಐ ಗಣೇಶ್ ತಿಳಿಸಿದ್ದಾರೆ.