ತುಮಕೂರು: ಕಾಂಗ್ರೆಸ್ ಮತ್ತು ಜೆಡಿಎಸ್ನ ಭದ್ರಕೋಟೆಯನ್ನು ನುಚ್ಚುನೂರು ಮಾಡಲಾಗಿದೆ. ಆ ಎರಡೂ ಪಕ್ಷಗಳ ಯಾವ ಶಕ್ತಿಯೂ ನಮ್ಮ ಗೆಲುವನ್ನು ತಡೆಯಲು ಸಾಧ್ಯವಿಲ್ಲ ಎಂದು ಸಿಎಂ ಯಡಿಯೂರಪ್ಪ ಅಬ್ಬರಿಸಿದರು.
ಶಿರಾ ಉಪಸಮರ ಹಿನ್ನೆಲೆಯಲ್ಲಿ ಶುಕ್ರವಾರ ಮದಲೂರಿನಲ್ಲಿ “ವಿಜಯ ಸಂಕಲ್ಪ ಯಾತ್ರೆ”ಗೆ ಚಾಲನೆ ನೀಡಿ ಮಾತನಾಡಿದ ಬಿಎಸ್ವೈ, ಕಾಂಗ್ರೆಸ್-ಜೆಡಿಎಸ್ ಎರಡನೇ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿವೆ. ಮದಲೂರು ಕೆರೆಗೆ ನೀರು ಬಿಡಲು ನಾನು ಹಿಂದೆ ಹಣ ಬಿಡುಗಡೆ ಮಾಡಿದ್ದೇನೆ. 6 ತಿಂಗಳಲ್ಲಿ ನೀರು ಹರಿಸುವೆ. ಯಡಿಯೂರಪ್ಪ ಕೊಟ್ಟ ಭರವಸೆ ಹುಸಿಯಾಗಿಲ್ಲ. ನನ್ನ ಬಾಯಿಯಿಂದ ಬರೋದು ಅಕ್ಷರಶಃ ಸತ್ಯವಾಗುತ್ತೆ ಎಂದು ಭರವಸೆ ನೀಡಿದರು.
ನಿಮ್ಮ ಯಡಿಯೂರಪ್ಪ ಕೊಟ್ಟ ಭರವಸೆಯನ್ನೂ ಎಂದೂ ತಪ್ಪಿಲ್ಲ. ಕಾಡುಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ಕೆ.ಆರ್.ಪೇಟೆಗೆ ನಾವು ಕೊಟ್ಟ ಭರವಸೆ ಈಡೇರಿಸಿದ್ದೇವೆ. ಇದೇ ರೀತಿ ಶಿರಾದಲ್ಲೂ ಮಾಡುತ್ತೇವೆ. ಹೇಮಾವತಿ ನೀರು ತಂದು ಮದಲೂರು ಕೆರೆ ತುಂಬಿಸುತ್ತೇನೆ. ಕುಂಚಿಟಿಗ ಸಮುದಾಯವನ್ನು ಒಬಿಸಿಗೆ ಸೇರಿಸುವ ಕೆಲಸವನ್ನು ಕೇಂದ್ರದಿಂದ ಮಾಡುತ್ತೇವೆ. ಶಿರಾ ತಾಲೂಕಿನ 60 ಕೆರೆಗೆ ಭದ್ರಾ ಮೇಲ್ದಂಡೆಯಿಂದ ನೀರು ತುಂಬಿಸುತ್ತೇವೆ ಎಂದು ಭರವಸೆಗಳ ಮಹಾಪೂರವನ್ನೇ ಸಿಎಂ ಹರಿಸಿದರು.
ಮಹಿಳಾ ಸಬಲೀಕರಣಕ್ಕೆ ಏನು ಬೇಕೋ ಅದನ್ನು ಮಾಡುತ್ತೇನೆ. ನನ್ನ ಬಾಯಿಯಿಂದ ಬರೋದು ಅಕ್ಷರಶಃ ಸತ್ಯವಾಗುತ್ತೆ. ನೀವು ನೆಮ್ಮದಿ-ಶಾಂತಿಯಿಂದ ಬದುಕುವಂತೆ ಮಾಡುತ್ತೇನೆ. ಶಿರಾ ತಾಲೂಕನ್ನು ಶಿಕಾರಿಪುರ ತಾಲೂಕಿನಂತೆ ಮಾಡುತ್ತೇನೆ ಎಂದು ಭರವಸೆಯಿತ್ತರು. ಚುನಾವಣೆ ಮುಗಿದ ಮೇಲೆ 4-5ನೇ ತಾರೀಖಿನಂದು ಚರ್ಚೆ ಮಾಡಿ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದರು.
‘ಕನಕಪುರ ಬಂಡೆಯಲ್ಲಿ ಕ್ರಿಶ್ಚಿಯನ್ ಮೂರ್ತಿ ಸ್ಥಾಪಿಸುವಾಗ ಒಕ್ಕಲಿಗರು ನೆನಪಾಗಲಿಲ್ಲವೇ?’