ಶಿವಮೊಗ್ಗ: ಎಐಸಿಸಿ ಚುಕ್ಕಾಣಿ ಹಿಡಿದಿರುವ ಮಲ್ಲಿಕಾರ್ಜುನ ಖರ್ಗೆ ಅವರು ನ.6ರಂದು ಬೆಂಗಳೂರಿಗೆ ಆಗಮಿಸುತ್ತಿದ್ದು, ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರದ ಬಳಿಕ ಮೊದಲ ಬಾರಿಗೆ ತವರು ರಾಜ್ಯಕ್ಕೆ ಬರಲಿರುವ ಖರ್ಗೆ ಅವರನ್ನು ಅದ್ದೂರಿಯಾಗಿ ಅಭಿನಂದಿಸಲು ಕೆಪಿಸಿಸಿ ಮುಂದಾಗಿದೆ.
ಈ ಕುರಿತು ಶನಿವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ದಶಕಗಳ ಬಳಿಕ ಕನ್ನಡಿಗರೊಬ್ಬರು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಇದರಿಂದ ರಾಜ್ಯದಲ್ಲಿ ಕಾಂಗ್ರೆಸ್ಗೆ ಶಕ್ತಿ ಬಂದಿದೆ. ಮೊದಲ ಬಾರಿಗೆ ಬೆಂಗಳೂರಿಗೆ ಬರುತ್ತಿರುವ ಖರ್ಗೆ ಅವರನ್ನು ಅಭಿನಂದಿಸಲು ಪಕ್ಷದ ಎಲ್ಲ ಜನಪ್ರತಿನಿಧಿಗಳು, ವಿವಿಧ ಘಟಕಗಳ ಪ್ರಮುಖರು ಬೆಂಗಳೂರಿಗೆ ಆಗಮಿಸಲು ಸಿದ್ಧತೆ ಮಾಡಿಕೊಳ್ಳಬೇಕೆಂದರು.
ಅ.30ರಂದು ಬೆಂಗಳೂರಿನಲ್ಲಿ ಸಭೆ ನಡೆಸಿ ಖರ್ಗೆ ಅಭಿನಂದನಾ ಸಮಾರಂಭದ ಸ್ಥಳ ಹಾಗೂ ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು. ಪಕ್ಷದ ಹಿರಿಯ ಕಟ್ಟಾಳು, ಅನುಭವಿ ನಾಯಕನನ್ನು ಅವಿಸ್ಮರಣೀಯವಾಗಿ ಅಭಿನಂದಿಸಲಾಗುವುದು ಎಂದರು.