ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ ಹಿನ್ನಲೆಯಲ್ಲಿ ನಗರದಾದ್ಯಂತ ಸೋಮವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು.
ವಿಮಾನ ನಿಲ್ದಾಣಕ್ಕೆ ಆಗಮಿಸುವವರ ನಿಮಿತ್ತ ಜಿಲ್ಲಾಡಳಿತ ಕೆಲ ಮಾರ್ಗಗಳನ್ನು ಬದಲಿಸಿದರೂ ಸಂಚಾರ ದಟ್ಟಣೆ ನಿಯಂತ್ರಣ ಸಾಧ್ಯವಾಗಲಿಲ್ಲ. ಆಲ್ಕೊಳದಿಂದ ಬೈಪಾಸ್, ಶ್ರೇಷಾದ್ರಿಪುರಂನಿಂದ ಎಂಆರ್ಎಸ್ ಹಾಗೂ ವಡ್ಡಿನಕೊಪ್ಪದಿಂದ ವಿಮಾನ ನಿಲ್ದಾಣದವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಮೂರು ಸಾವಿರಕ್ಕೂ ಅಧಿಕ ಸರ್ಕಾರಿ ಮತ್ತು ಖಾಸಗಿ, ಶಾಲಾ-ಕಾಲೇಜುಗಳು ಬಸ್ಗಳು, ಕಾರು, ಜೀಪು, ಟ್ರಾಕ್ಟರ್ ಮತ್ತು ಬೈಕ್ಗಳಲ್ಲಿ ಜನರು ಆಗಮಿಸಿ ದೂರದಿಂದಲೇ ವಿಮಾನ ನಿಲ್ದಾಣದ ಟರ್ಮಿನಲ್ ಮತ್ತು ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು. ಬಳಿಕ ಕಾರ್ಯಕ್ರಮ ಮುಗಿಸಿ ಬರುವಾಗಲೂ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದ್ದರಿಂದ ಜನರು ವಾಹನಗಳಿಂದ ಇಳಿದು ನಾಲ್ಕೈದು ಕಿ.ಮೀ. ನಡೆದೇ ಸಾಗಿದರು. ಬಿಜೆಪಿ ಧ್ವಜಗಳನ್ನು ಹಿಡಿದು ಘೋಷಣೆ ಕೂಗುತ್ತಾ ಸಭಾ ಕಾರ್ಯಕ್ರಮದತ್ತ ಮುನ್ನಡೆದರು. ಮೈಲುದ್ದ ವಾಹನಗಳು ನಿಂತಿದ್ದರೂ ವಿಮಾನ ನಿಲ್ದಾಣ ಕಣ್ತುಂಬಿಕೊಳ್ಳಬೇಕು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ತಿರದಿಂದ ನೋಡಬೇಕೆಂಬ ಜನರ ಉತ್ಸಾಹ ಮಾತ್ರ ಕಮರಲಿಲ್ಲ.