ಶಿವಮೊಗ್ಗ: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಯಾವಾಗಲೂ ತಲೆತಿರುಕನ ತರಹ ಮಾತನಾಡುತ್ತಾರೆ.
ಅವರಿಗೆ ಯಾವುದು ಸರಿ ಯಾವುದು ತಪ್ಪು ಎನ್ನುವ ಕಲ್ಪನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಕಿಡಿಕಾರಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದೇಶದಲ್ಲಿ ಹಿಂದುಗಳ ಸಂಘಟನೆ ಮಾಡುತ್ತ
ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಆರ್ಎಸ್ಎಸ್ ಬಗ್ಗೆ ನೂರಕ್ಕೆ ತೊಂಬತ್ತು ಜನ ಒಳ್ಳೆಯ ಮಾತನಾಡುತ್ತಾರೆ. ಅಂತಹ
ಸಂಘಟನೆ ಬಗ್ಗೆ ಹಗುರವಾಗಿ ಮಾತನಾಡುವುದು ಸಿದ್ದರಾಮಯ್ಯ ಅವರ ಯೋಗ್ಯತೆ ತೋರಿಸುತ್ತದೆ. ಅವರು ಏನೇ
ಮಾತನಾಡಿದರೂ ಕವಡೆ ಕಿಮ್ಮತ್ತಿಲ್ಲ. ಹಗುರವಾಗಿ ಮಾತನಾಡಿ ಅವರ ಗೌರವವನ್ನು ಅವರೇ ಹಾಳುಮಾಡಿಕೊಳ್ಳುತ್ತಾರೆ ಎಂದರು.
ಪಿಎಫ್ಐನಿಂದ ಏನೇನು ಅನಾಹುತವಾಗಿದೆ ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಅವರು ಕೊಲೆಗಳನ್ನೂ ಮಾಡಿದ್ದಾರೆ. ಅವರ
ವಿರುದ್ಧ ಏನೇನು ಕ್ರಮ ಕೈಗೊಳ್ಳಬೇಕೋ ತೆಗೆದುಕೊಳ್ಳುತ್ತಾರೆ. ಪಿಎಫ್ಐ ಸೇರಿದಂತೆ ಬೇರೆ ಸಂಘಟನೆಗಳು ಬೇರೆ ಯಾವ
ರೂಪದಲ್ಲೂ ತಲೆ ಎತ್ತಲು ಬಿಡುವುದಿಲ್ಲ. ಹಾಗೇನಾದರೂ ತಲೆಯೆತ್ತುವ ಕೆಲಸವನ್ನು ಮಾಡಿದರೆ ತಕ್ಕ ಶಾಸ್ತಿಯನ್ನು ಪ್ರಧಾನಿ
ಹಾಗೂ ಕೇಂದ್ರ ಗೃಹ ಸಚಿವರು ಮಾಡಲಿದ್ದಾರೆ ಎಂದು ಎಚ್ಚರಿಸಿದರು.
ಹಲವು ವರ್ಷಗಳಿಂದ ಭಯೋತ್ಪಾದಕ ಕೆಲಸ ನಡೆಸುತಿದ್ದ ಪಿಎಫ್ಐ ಸೇರಿ ಐದು ಸಂಘಟನೆಗಳು ದೇಶಕ್ಕೆ ಮಾರಕವಾಗಿದ್ದವು.
ಶಾಂತಿ ಭಂಗ, ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿ ಆದೇಶ
ಹೊರಡಿಸಿರುವುದು ಒಳ್ಳೆಯ ಬೆಳವಣಿಗೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ರಾಜ್ಯದ ಜನರ
ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.