ಚಂಡೀಗಢ: ಹರಿಯಾಣದ ಫರೀದಾಬಾದ್ನಲ್ಲಿ ಹಾಡಹಗಲೇ ನಡೆದ ಯುವತಿಯೊಬ್ಬಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಪೊಲೀಸ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.
ಸೋಮವಾರ ಮಧ್ಯಾಹ್ನ ನಿಖಿತಾ ತೋಮರ್ ಎಂಬ 21 ವರ್ಷದ ಯುವತಿ ಪರೀಕ್ಷೆ ಮುಗಿಸಿ ಕಾಲೇಜಿನಿಂದ ಹೊರಬರುತ್ತಿದ್ದಳು. ಈ ಸಂದರ್ಭದಲ್ಲಿ ಆಕೆಯ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಮಾಡಲಾಗಿದೆ. ಈ ದೃಶ್ಯ ಸಿಸಿಟಿವಿಯಲ್ಲೂ ಸೆರೆಯಾಗಿದೆ.
ಪ್ರಕರಣದ ಪ್ರಮುಖ ಆರೋಪಿ ತೌಸೀಫ್ ಬಂಧನವಾಗಿದ್ದು, ತಪ್ಪನ್ನು ಒಪ್ಪಿಕೊಂಡಿದ್ದಾನೆ. ಮತ್ತೊಬ್ಬನೊಂದಿಗೆ ಮದುವೆಯಾಗಲು ನಿಖಿತಾ ಒಪ್ಪಿದ್ದಕ್ಕೆ ಆಕೆಯನ್ನು ಕೊಲೆ ಮಾಡಿದ್ದಾಗಿ ಹೇಳಿದ್ದಾನೆ.
ಕೊಲೆಯಾಗುವ ಒಂದು ದಿನದ ಮುಂಚೆ ಅ. 24-25ರ ಮಧ್ಯರಾತ್ರಿ ನಿಖಿತಾ ಮತ್ತು ತೌಸೀಫ್ ಮೊಬೈಲ್ನಲ್ಲಿ ಮಾತನಾಡಿದ್ದಾರೆ. ಸುಮಾರು 16 ನಿಮಿಷ ಇಬ್ಬರು ಸಂಭಾಷಣೆ ನಡೆಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿಯ ನೋಟು ಕಾಂಗ್ರೆಸ್ಗೆ ಓಟು ಅಂದ್ರೆ ದೂರು ಕೊಡ್ತಾರೆ – ಡಿಕೆಶಿ ಆಕ್ರೋಶ
ಇನ್ನು ನಿಖಿತಾ ಕುಟುಂಬದ ಪ್ರಕಾರ ತೌಸೀಫ್ ಬಹಳ ದಿನಗಳಿಂದ ಅವರ ಮಗಳಿಗೆ ಕಿರುಕುಳ ನೀಡುತ್ತಿದ್ದನಂತೆ. ಮದುವೆಯಾಗುವಂತೆ ಮಗಳನ್ನು ಪೀಡಿಸುತ್ತಿದ್ದಲ್ಲದೆ, ಆಕೆಯನ್ನು ಅಪಹರಿಸಿದ್ದಾನಂತೆ. ಈ ಬಗ್ಗೆ ದೂರು ನೀಡಿದ ಮೇರೆಗೆ 2018ರಲ್ಲಿ ತೌಸೀಫ್ನನ್ನು ಬಂಧಿಸಲಾಗಿತ್ತಂತೆ. ಇದಾದ ಬಳಿಕ ಎರಡು ಕುಟುಂಬಗಳು ಒಟ್ಟುಗೂಡಿ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದರಂತೆ. ಅಲ್ಲದೆ, ದೂರನ್ನು ಸಹ ಹಿಂಪಡೆದುಕೊಂಡಿದ್ದೆವು ಎಂದು ಸಂತ್ರಸ್ತೆಯ ಸಹೋದರ ತಿಳಿಸಿದ್ದಾರೆ.
ನನ್ನ ವಿರುದ್ಧ ದೂರು ನೀಡಿ ಬಂಧಿಸಿದ್ದಕ್ಕೆ ನಿಖಿತಾಳನ್ನು ಕೊಂದು ಸೇಡು ತೀರಿಸಿಕೊಂಡಿದ್ದೇನೆಂದು ಆರೋಪಿ ತೌಸೀಫ್ ಬಾಯ್ಬಿಟ್ಟಿದ್ದಾನೆ. ನಾನು ಬಂಧನವಾಗಿದ್ದರಿಂದ ಡಾಕ್ಟರ್ ಓದಲು ಆಗಲಿಲ್ಲ. ಅದೇ ದ್ವೇಷಕ್ಕೆ ಕೊಲೆ ಮಾಡಿದೆ ಎಂದು ತೌಸೀಫ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.
ಘಟನೆ ಹಿನ್ನೆಲೆ
ಸೋಮವಾರ ಮಧ್ಯಾಹ್ನ ನಿಖಿತಾ ಕಾಲೇಜಿನ ಹೊರಗಡೆ ವಾಹನದಲ್ಲಿ ಬಂದಿದ್ದ ಆರೋಪಿ ತೌಸೀಫ್ ಆಕೆಯನ್ನು ಬಲವಂತಾಗಿ ಕಾರೊಳಗೆ ಹಾಕಿ ಅಪಹರಿಸಲು ಯತ್ನಿಸಿದ್ದಾನೆ. ಈ ವೇಳೆ ನಿಖಿತಾ ವಿರೋಧ ವ್ಯಕ್ತಪಡಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ತೌಸೀಫ್ ಗುಂಡು ಹಾರಿಸಿದ್ದಾನೆ. ಈ ವೇಳೆ ತೌಸೀಫ್ಗೆ ಆತನ ಸ್ನೇಹಿತನ ಕೂಡ ಸಾಥ್ ನೀಡಿದ್ದ.
ಆರೋಪಿಗಳು ಯುವತಿ ಮೇಲೆ ಗುಂಡು ಹಾರಿಸಿ ವಾಹನ ಹತ್ತಿ ಪರಾರಿಯಾದರೆ, ಇತ್ತ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಕೂಡಲೇ ನಿಖತಾಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಗಂಭೀರ ಗಾಯಗೊಂಡಿದ್ದರಿಂದ ನಿಖಿತಾ ಮೃತಪಟ್ಟಿದ್ದಾಳೆ. ಸಿಸಿಟಿವಿಯನ್ನು ಆಧರಿಸಿ ಇಬ್ಬರು ಆರೋಪಿಯನ್ನು ಬಂಧಿಸಲಾಗಿದೆ. (ಏಜೆನ್ಸೀಸ್)
ಕಾಲೇಜು ಯುವತಿ ಮೇಲೆ ಗುಂಡಿನ ದಾಳಿ- ಸಿಸಿಟಿವಿಯಲ್ಲಿ ದಾಖಲಾಯ್ತು ಭಯಾನಕ ದೃಶ್ಯ