ಕುಂಭಕೋಣಂ : ಕ್ಯಾನ್ಸರ್ನಿಂದ ಬಳಲುತ್ತಿದ್ದ ಪತ್ನಿಗೆ ಮಾತ್ರೆ ಖರೀದಿಸಲು ಪತಿ ಬೈಸಿಕಲ್ನಲ್ಲಿ ಕುಂಭಕೋಣಂನಿಂದ 140 ಕಿ.ಮೀ.ದೂರ ಕ್ರಮಿಸಿ ಅಚ್ಚರಿಸಿ ಮೂಡಿಸಿದ್ದಾರೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಯಾವುದೇ ವಾಹನಗಳ ಸೌಲಭ್ಯ ಇಲ್ಲದ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕ ಅರಿವಳಗನ್ ತನ್ನ ಕ್ಯಾನ್ಸರ್ ಪೀಡಿತ ಪತ್ನಿ ಮಂಜುಳಾ ಅವರನ್ನು ಬೈಸಿಕಲ್ನಲ್ಲಿ ಕೂರಿಸಿಕೊಂಡು ಪುದುಚೇರಿಯಲ್ಲಿರುವ ಜವಾಹರಲಾಲ್ ನೆಹರೂ ಸ್ನಾತಕೋತ್ತರ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆ (ಜೆಐಪಿಎಂಇಆರ್) ಆಸ್ಪತ್ರೆಗೆ ತಲುಪಿ ಚಿಕಿತ್ಸೆ ಹಾಗೂ ಮಾತ್ರೆ ಕೊಡಿಸಿದರು.
ರಾಷ್ಟ್ರ ವ್ಯಾಪಿ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಆಸ್ಪತ್ರೆಗೆ ತೆರಳಲು ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲ. ಟ್ಯಾಕ್ಸಿ
ಯಲ್ಲಿ ಹೋಗಲು ಅವರ ಬಳಿ ಹಣ ಇಲ್ಲ. ಇಂಥ ಸಂದರ್ಭದಲ್ಲಿ ಅವರಿಗೆ ನೆರವಿಗೆ ಬಂದಿದ್ದು ಸೈಕಲ್. ಮಂಜುಳಾ ಅವರು ಐದು ತಿಂಗಳಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಇವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಮಾರ್ಚ್ 31ಕ್ಕೆ ಆರೋಗ್ಯ ತಪಾಸಣೆಗೆಂದು ನಿಗದಿ ಮಾಡಿ ಆಸ್ಪತ್ರೆಗೆ ಬರುವಂತೆ ಸೂಚಿಸಿದ್ದರು. ಲಾಕ್ಡೌನ್ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಬರಲು ಸಾರಿಗೆ ವ್ಯವಸ್ಥೆ ಇರಲಿಲ್ಲ. ಧೈರ್ಯ ಮಾಡಿದ ಅರಿವಳಗನ್, ಪತ್ನಿಗಾಗಿ ಸುಮಾರು 17 ತಾಸುಗಳ ಕಾಲ ಸೈಕಲ್ನಲ್ಲಿ ಸವಾರಿ ಮಾಡಿ ಎಲ್ಲರನ್ನು ಬೆರಗುಗೊಳಿಸಿದ್ದಾರೆ.
ಪತ್ನಿಯ ನೋವು ತಡೆಯಲಾರದೆ ಬೈಸಿಕಲ್ನಲ್ಲಿ ಹೊರಟೆ: ಸೈಕಲ್ನಲ್ಲಿ ಆಸ್ಪತ್ರೆಗೆ ಹೊರಟರೆ ಒಂದು ದಿನ ಬೇಕಾಗುತ್ತದೆ ಎಂಬುದರ ಬಗ್ಗೆಯೂ ನನಗೆ ಅರಿವಿರಲಿಲ್ಲ. ನನ್ನ ಹೆಂಡತಿ ಮಾತ್ರೆ ಮುಗಿದು ನೋವಿನಿಂದ ನರಳಾಡುವುದನ್ನು ನೋಡಲು ಆಗುತ್ತಿರಲಿಲ್ಲ. ಹಾಗಾಗಿ ಬೆಳಗಿನ ಜಾವ ಐದು ಗಂಟೆಗೆ ಸವಾರಿ ಆರಂಭಿಸಿದೆವು’ ಮಧ್ಯೆ 2 ತಾಸು ವಿಶ್ರಾಂತಿ ಪಡೆದುಕೊಂಡೆವು. ರಾತ್ರಿ 10.30ರ ಸುಮಾರಿಗೆ ಆಸ್ಪತ್ರೆ ತಲುಪಿದೆವು. ಸೈಕಲ್ನಲ್ಲಿಯೇ ಕುಂಭಕೋಣಂನಿಂದ ಬಂದಿರುವ ವಿಚಾರ ಕೇಳಿದ ಆಸ್ಪತ್ರೆ ಸಿಬ್ಬಂದಿ ಅಚ್ಚರಿಗೊಂಡರು ಎಂದು ಅರಿವಳಗನ್ ಹೇಳಿದ್ದಾರೆ.
ಮಂಜುಳಾ ಅವರನ್ನು ತಪಾಸಣೆ ಮಾಡಿದ ವೈದ್ಯರು, ಒಂದು ತಿಂಗಳಿಗಾಗುವಷ್ಟು ಮಾತ್ರೆ ಹಾಗೂ ಔಷಧಿ ವಿತರಿಸಿದರು.
ಅಲ್ಲದೆ ವೈದ್ಯರು, ಇಬ್ಬರಿಗೆ ಊಟ ನೀಡಿ 8,000 ರೂಪಾಯಿ ಹಣ ಕೊಟ್ಟು ಆಂಬುಲೆನ್ಸ್ನಲ್ಲಿಯೇ ಕುಂಭಕೋಣಂನಲ್ಲಿರುವ ಮನೆಗೆ ಕಳುಹಿಸಿ ಮಾನವೀಯತೆ ಮೆರೆದರು. (ಏಜೆನ್ಸೀಸ್)