ಮೈಸೂರು: ಸಂಸ್ಕಾರಯುತ ಜೀವನ ನಡೆಸುವುದೇ ಬದುಕಿನ ಧ್ಯೇಯವಾಗಬೇಕು ಎಂದು ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್ ಹೇಳಿದರು.
ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ, ಜೆಎಸ್ಎಸ್ ಮಹಾವಿದ್ಯಾಪೀಠ ಹಾಗೂ ಶಿವರಾತ್ರೀಶ್ವರ ಧಾರ್ಮಿಕ ದತ್ತಿಗಳ ಸಂಯುಕ್ತಾಶ್ರಯದಲ್ಲಿ ಊಟಿಯ ತೀಟಕಲ್ನ ಜೆಎಸ್ಎಸ್ ಪಬ್ಲಿಕ್ ಶಾಲಾ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಜೀವನೋತ್ಸಾಹ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಸಂಸ್ಕಾರಯುತ ಜೀವನ ಕುರಿತು ಉಪನ್ಯಾಸ ನೀಡಿದರು.
ಭಗವಂತ ಸೃಷ್ಟಿಸಿದ ಪ್ರಕೃತಿಯ ಸಂಪತ್ತನ್ನು ಇತಿಮಿತಿಯೊಂದಿಗೆ ಬಳಸಿಕೊಳ್ಳಬೇಕು. ಅತಿ ಆಸೆ ಬದುಕಿಗೆ ಒಳ್ಳೆಯದಲ್ಲ. ನೀತಿವಂತರಾಗಿ, ದಯಾಗುಣವಂತರಾಗಿ ಹಾಗೂ ಸಂಸ್ಕಾರವಂತರಾಗಿ ಜೀವನ ಸಾಗಿಸಬೇಕು. ನಮ್ಮಲ್ಲಿರುವ ಅರಿಷಡ್ವರ್ಗಗಳನ್ನು ದಮನ ಮಾಡಬೇಕು. ಸಾತ್ವಿಕ ಗುಣಗಳನ್ನು ಅಳವಡಿಸಿಕೊಂಡು ಸತ್ಸಂಗವನ್ನು ಮಾಡುತ್ತ ಸುಂದರ ಬದುಕನ್ನು ಹೊಂದಬೇಕು ಎಂದು ಸಲಹೆ ನೀಡಿದರು.
ಇಂತಹ ಶಿಬಿರಗಳು ನಮ್ಮ ಬದುಕಿನಲ್ಲಿ ಸಕಾರಾತ್ಮಕ ಭಾವನೆ ಮೂಡಿಸುತ್ತವೆ. ಸುತ್ತೂರು ಶ್ರೀಗಳ ದೂರದೃಷ್ಟಿಯ ಫಲವಾಗಿ ಇಂತಹ ಕಾರ್ಯಕ್ರಮ ರೂಪುಗೊಳ್ಳುತ್ತಿವೆ ಎಂದರು.
ಶಿಬಿರಾರ್ಥಿಗಳಾದ ಬಳ್ಳಾರಿಯ ಶಕುಂತಲಾ ರೆಡ್ಡಿ, ಬೆಳಗಾವಿಯ ವಿವೇಕ ಪತ್ತಾರ್, ಬೆಂಗಳೂರಿನ ವಿಜಯಾ ದಿವಾಕರ್, ಬಾಗಲಕೋಟೆಯ ಸುರೇಶ್ ಹಿರೇಮಠ್, ವಿಜಯಪುರದ ಕಮಲಾ, ಮಹಾರಾಷ್ಟ್ರದ ಸಾಂಗ್ಲಿಯ ವಿಜಯಾ ಬಿಜ್ಜರಗಿ ಹಾಗೂ ಗೋಕಾಕ್ನ ರಾಮಚಂದ್ರ ಕಾಕಡೆ ಶಿಬಿರದ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಂಡರು. 233 ಶಿಬಿರಾರ್ಥಿಗಳು ಭಾಗವಹಿಸಿದ್ದರು.