ಶಿವಮೊಗ್ಗ: ನಗರದ ಸಿಟಿ ಸೆಂಟ್ರಲ್ ಮಾಲ್ನಲ್ಲಿ ಇರಿಸಿದ್ದ ಸಾವರ್ಕರ್ ಭಾವಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಸರ್ಕಾರಿ ಅಧಿಕಾರಿಗಳ ಕೆಲಸಕ್ಕೆ ಅಡ್ಡಿ ಪಡಿಸಿದ ಆರೋಪದ ಕಾರಣದಿಂದ ಬಂಧನಕ್ಕೆ ಒಳಗಾಗಿದ್ದ ಎಂ.ಡಿ.ಷರೀಫ್ಗೆ ಎರಡನೇ ಜೆಎಂಎಫ್ಸಿ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಪ್ರೇಮ್ ಸಿಂಗ್ಗೆ ಚಾಕು ಇರಿತ ಪ್ರಕರಣದ ಮೂವರು ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆ.14ರಂದು ಸಿಟಿ ಸೆಂಟ್ರಲ್ ಮಾಲ್ನಲ್ಲಿ ಸಾವರ್ಕರ್ ಭಾವಚಿತ್ರಕ್ಕೆ ಷರೀಫ್ ವಿರೋಧ ವ್ಯಕ್ತಪಡಿಸಿ ಅದನ್ನು ತೆರವುಗೊಳಿಸುವಂತೆ ಒತ್ತಾಯಿಸಿದ್ದ. ನಗರ ಪಾಲಿಕೆ ಆಯುಕ್ತರ ಕೆಲಸಕ್ಕೆ ಆತ ಅಡ್ಡಿ ಪಡಿಸಿದ್ದಾನೆ ಎಂದು ದೂರು ದಾಖಲಿಸಿದ್ದ ಪೊಲೀಸರು ಬಂಧಿಸಿ ನ್ಯಾಯಾಧೀಶರೆದರು ಹಾಜರುಪಡಿಸಿದ್ದರು. ಆತನಿಗೆ ಆ.26ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.
ಈ ನಡುವೆ ಜಾಮೀನು ಕೋರಿ ಷರೀಪ್ ಅರ್ಜಿ ಸಲ್ಲಿಸಿದ್ದ. ಆದರೆ ಜಾಮೀನು ಅರ್ಜಿ ವಿಚಾರಣೆ ಮುಂದೂಡಲ್ಪಟ್ಟಿತ್ತು. ಶನಿವಾರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.
ನ್ಯಾಯಾಲಯಕ್ಕೆ 50 ಸಾವಿರ ರೂ. ಬಾಂಡ್ ಹಾಜರುಪಡಿಸಬೇಕು. ಪ್ರಕರಣದ ವಿಚಾರಣೆಗೆ ಠಾಣಾಧಿಕಾರಿಗಳು ಕರೆದಾಗ ಹಾಜರಾಗಿ ಸಹಕಾರ ನೀಡಬೇಕು. ಯಾವುದೇ ಕಾರಣಕ್ಕೂ ಸಾಕ್ಷೃ ನಾಶ ಮಾಡಬಾರದು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.