ಬೆಂಗಳೂರು: ಕೊರೋನ ಹಾವಾಳಿಯಿಂದ ತತ್ತಿರಸಿರುವ ಕನ್ನಡ ಚಿತ್ರರಂಗ, ಶ್ರಾವಣ ಆರಂಭದ ವೇಳೆಗೆ ಸ್ವಲ್ಪ ಚುರುಕುಗೊಂಡಿದೆ. ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಕೆಲವು ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಈ ಪೈಕಿ ‘ಶಾರ್ದೂಲ’ ಚಿತ್ರ ಸಹ ಒಂದು.
ಇದನ್ನೂ ಓದಿ: ಸದ್ಯದಲ್ಲೇ ಸೆನ್ಸಾರ್ ಅಂಗಳಕ್ಕೆ ದಿಗಂತ್ ಅಭಿನಯದ ‘ಮಾರಿಗೋಲ್ಡ್’ …
ಇದೊಂದು ಉತ್ತಮ ಕಥಾಹಂದರ ಹೊಂದಿರುವ ಚಿತ್ರ ಎನ್ನುತ್ತಾರೆ ಚಿತ್ರದ ನಾಯಕರಲ್ಲೊಬ್ಬರಾದ ಚೇತನ್ ಚಂದ್ರ. ‘ಚಿತ್ರದಲ್ಲಿ ಎಲ್ಲಾ ಕಲಾವಿದರ ಅಭಿನಯವೂ ಸೂಪರ್ ಆಗಿ ಮೂಡಿಬಂದಿದೆ. ಪ್ಯಾಂಡಮಿಕ್ ಸಮಯದಲ್ಲಿ ಜನರಿಗೆ ಉತ್ತಮ ಮನೋರಂಜನೆ ನೀಡಲು ಇದೇ 20ರಂದು ‘ಶಾರ್ದೂಲ’ ಬಿಡುಗಡೆಯಾಗುತ್ತಿದೆ. ನೀವೆಲ್ಲಾ ನೋಡಿ ಹರಸಿ’ ಎನ್ನುತ್ತಾರೆ ಅವರು.
ಈ ಚಿತ್ರದಲ್ಲಿ ಭಯಗ್ರಸ್ತ ಹುಡುಗಿಯಾಗಿ ಕೃತಿಕಾ ರವೀಂದ್ರ ಕಾಣಿಸಿಕೊಂಡಿದ್ದಾರಂತೆ. ‘ಬಹಳ ಹೆದರುವ ಹುಡುಗಿಯಾಗಿ ನಾನು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ದೀಕ್ಷ ಎನ್ನುವುದು ನನ್ನ ಪಾತ್ರದ ಹೆಸರು’ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಳ್ಳುವ ಕೃತಿಕಾ, ಈ ಚಿತ್ರಕ್ಕೆ ಎಲ್ಲರ ಪ್ರೋತ್ಸಾಹವಿರಲಿ ಎನ್ನುತ್ತಾರೆ.
‘ರಾಬರ್ಟ್’ನಲ್ಲಿ ನಟಿಸಿರುವ ಐಶ್ವರ್ಯ ಪ್ರಸಾದ್, ಈ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ‘ಆ ಚಿತ್ರದ ಪಾತ್ರಕ್ಕೂ, ಈ ಚಿತ್ರದ ಪಾತ್ರಕ್ಕೂ ತುಂಬಾ ವ್ಯತ್ಯಾಸವಿದೆ. ಕೃತಿಕಾ ಅವರದು ಹೆದರಿಕೊಳ್ಳುವ ಪಾತ್ರವಾದರೆ, ನನ್ನದು ಬೋಲ್ಡ್ ಹುಡುಗಿ ಪಾತ್ರ’ ಎನ್ನುತ್ತಾರೆ ಐಶ್ವರ್ಯ.
ಈ ಚಿತ್ರವನ್ನು ಭೈರವ ಸಿನಿಮಾಸ್ ಮತ್ತು ಸಿ ವಿ ಆರ್ ಸಿನಿಮಾಸ್ ಲಾಂಛನದಲ್ಲಿ ರೋಹಿತ್ ಮತ್ತು ಕಲ್ಯಾಣ್ ನಿರ್ಮಿಸುತ್ತಿದ್ದು, ರಾಜ್ಯಾದ್ಯಂತ 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅವರು ಚಿತ್ರ ಬಿಡುಗಡೆ ಮಾಡುತ್ತಿದ್ದಾರಂತೆ. ‘ಇಂತಹ ಸಮಯದಲ್ಲಿ ಪ್ರೇಕ್ಷಕರೆ ನಮ್ಮ ಕೈ ಹಿಡಿಯಬೇಕು. ಕರೊನಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಬಿಡುಗಡೆ ಮಾಡುತ್ತಿದ್ದೇವೆ. ಯಾವುದೇ ಭಯವಿಲ್ಲದೇ ಚಿತ್ರಮಂದಿರಕ್ಕೆ ಬಂದು ನಮ್ಮ ಚಿತ್ರವನ್ನು ನೋಡಿ ಗೆಲ್ಲಿಸಿ’ ಎನ್ನುತ್ತಾರೆ ನಿರ್ಮಾಪಕದ್ವಯರಾದ ರೋಹಿತ್ ಹಾಗೂ ಕಲ್ಯಾಣ್.
ಇದನ್ನೂ ಓದಿ: 500 ಕೋಟಿ ಬಜೆಟ್ನಲ್ಲೊಂದು ಪ್ಯಾನ್ ಇಂಡಿಯಾ ಸಿನಿಮಾ!
ಈ ಹಿಂದೆ ‘ನಮ್ ಏರಿಯಲ್ಲೊಂದ್ ದಿನ’, ‘ತುಘಲಕ್’, ‘ಹುಲಿರಾಯ’ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದ ಅರವಿಂದ್ ಕೌಶಿಕ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಅವರೇ ಬರೆದಿದ್ದಾರೆ. ಮನು ಛಾಯಾಗ್ರಹಣ ಮತ್ತು ಸತೀಶ್ ಬಾಬು ಸಂಗೀತ ಈ ಚಿತ್ರಕ್ಕಿದೆ.
ಒಟಿಟಿಯಲ್ಲಿ ಬರಲಿದೆ ಪದ್ಮಶ್ರೀ ಪುರಸ್ಕೃತ ನಟಿ ಭಾರತಿ ವಿಷ್ಣುವರ್ಧನ್ ಅವರ ‘ಬಾಳೆ ಬಂಗಾರ’