ತುರುವೇಕೆರೆ: ಚಂಡೂರುಪುರದ ಶ್ರೀ ಶಂಭುಲಿಂಗೇಶ್ವರ ಜಾನುವಾರುಗಳ ಜಾತ್ರೆ ಈ ವರ್ಷ ಕಳೆಗಟ್ಟಿದ್ದು, ದುಭಾರಿ ಬೆಲೆಯ ಉತ್ತಮ ಹಳ್ಳಿಕಾರು ತಳಿಯ ರಾಸುಗಳಿಂದ ರೈತರ ಗಮನ ಸೆಳೆಯುತ್ತಿವೆ.
7 ದಿನಗಳ ಕಾಲ ನಡೆಯುವ ದನಗಳ ಜಾತ್ರೆಯಲ್ಲಿ ಎತ್ತ ನೋಡಿದರೂ ರಾಸುಗಳು ಕಾಣಸಿಗುತ್ತಿವೆ. ಪ್ರತೀ ವರ್ಷದಂತೆ ಜಾತ್ರೆಗೆ ತುಮಕೂರು, ಮಂಡ್ಯ, ದೊಡ್ಡಬಳ್ಳಾಪುರ, ಕೋಲಾರ, ಚಿತ್ರದುರ್ಗ, ಹಾವೇರಿ, ದಾವಣಗೆರೆ, ಇನ್ನು ಆನೇಕ ಜಿಲೆಗಳಿಂದ ರೈತರು ಹಾಗೂ ಯವಕರ ಸಮೂಹ ಆಗಮಿ ಸುತ್ತಿದೆ. ರೈತರು ಹಾಗೂ ರಾಸು ಕೊಳ್ಳವರು, ಮಾರು ವವರು, ದಳ್ಳಾಳಿಗಳು ಆಗಮಿಸಿ ದನಗಳನ್ನು ಮಾರಾಟ ಹಾಗೂ ಖರೀದಿ ಮಾಡುತ್ತಿದ್ದಾರೆ.
ಕೆಲ ರೈತರು ದನಗಳ ಬಗ್ಗೆ ಹೆಚ್ಚು ಅಕ್ಕರೆ ಇರುವವರು ಶಾಮಿಯಾನ ಹಾಕಿಸಿಕೊಂಡು ಪ್ರತೀ ದಿನ ಶೃಂಗರಿಸಿ ನಿತ್ಯ ಬೆಳಗ್ಗೆ ಸಂಜೆ ರೆವೆಬೂಸ, ಇಂಡಿ, ಬೆಣ್ಣೆ, ತುಪ್ಪ ತಿನ್ನಿಸಿ ಹೆಚ್ಚು ಆರೈಕೆ ಮಾಡುತ್ತಿದ್ದಾರೆ. ಜಾತ್ರೆಯಲ್ಲಿ ಹಾಲು ಕೊಡುವ ಹಸುಗಳು, ಹೊಲ ಉಳುವ ಎತ್ತುಗಳ ಮಾರಾಟ, ಖರೀದಿ ಮಾತ್ರ ನಡೆಯುತ್ತದೆ. ಸುಮಾರು 20 ಸಾವಿರದಿಂದ 3 ಲಕ್ಷದವರಗೆ ದನಗಳು ಮಾರಾಟವಾಗುತ್ತವೆ.
ಮೂಲ ಸೌಕರ್ಯ: ಜಾತ್ರೆಗೆ ಬರುವ ರೈತರಿಗೆ ಗ್ರಾಮ ಪಂಚಾಯಿತಿ ಸಕಲ ಸೌಕರ್ಯ ಕಲ್ಪಿಸಿದೆ. ಜಾತ್ರೆ ನಡೆಯುವ ಜಾಗದಲ್ಲಿ ವಿಶಾಲವಾದ ಮರ ಗಿಡಗಳಿದ್ದು, ನೆರಳಿನ ಸೌಕರ್ಯವಿದೆ. ಕುಡಿಯುವ ನೀರು, ಬೆಳಕು ಮೂಲ ಸೌಕರ್ಯಗಳನ್ನು ನೀಡಲಾಗಿದೆ.
15ಕ್ಕೆ ರಥೋತ್ಸವ, ಇಂದು ಕಬಡ್ಡಿ ಪಂದ್ಯ: ಜ.15ರಂದು ಚಂಡೂರುಪುರದ ಶ್ರೀಶಂಭುಲಿಂಗೇಶ್ವರ ರಥೋತ್ಸವ ನಡೆಯಲಿದ್ದು, ಜಾತ್ರೆ ಪ್ರಯುಕ್ತ ಪೌರಾಣಿಕ ನಾಟಕಗಳು, ಉತ್ಸವ, ಸುಗಮ ಸಂಗೀತ ಇನ್ನಿತರ ಕಾರ್ಯಕ್ರಮ ಆಯೋಜಿಸಿದ್ದು, ಜ.10ರ ರಾತ್ರಿ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ.
ಉತ್ತಮ ರಾಸುಗಳಿಗೆ ಬಹುಮಾನ: ಜಾತ್ರೆಯಲ್ಲಿ ಎಲ್ಲ ರೀತಿಯ ಕರಕುಶಲ ವಸ್ತುಗಳು, ಕೃಷಿ ಉಪಕರಣಗಳ ಪ್ರದರ್ಶನ ಮಾರಾಟ ನಡೆಯುತ್ತಿದೆ. ಉತ್ತಮ ರಾಸುಗಳನ್ನು ಜಾತ್ರೆಯಲ್ಲಿ ಮೆರವಣಿಗೆ ನಡೆಸಿ ಆಯ್ಕೆಮಾಡಿ ಸೂಕ್ತ ಬಹುಮಾನಗಳನ್ನು ನೀಡಿ ಗೌರವಿಸಲಾಗುತ್ತದೆ.
ಕೆಲ ವರ್ಷಗಳ ಹಿಂದೆ ಸಾಮಾನ್ಯವಾಗಿ ಸಂಕ್ರಾಂತಿ ಹಬ್ಬದಲ್ಲಿ ಶ್ರೀ ಶಂಭುಲಿಂಗೇಶ್ವರ ಸ್ವಾಮಿಯ ಮಡಿ ತೇರು ಎಳೆದ ನಂತರ ಪ್ರಾರಂಭವಾಗುತ್ತಿದ್ದ ಪುರ ಜಾತ್ರೆ ಇತ್ತೀಚಿನ ದಿನಗಳಲ್ಲಿ ಜನವರಿ ಮೊದಲ ವಾರದಲ್ಲಿಯೇ ಸೇರುತ್ತಿದೆ. ಅಷ್ಟೇ ಬೇಗ ಮುಗಿಯುತ್ತಿದೆ.
ನವೀನ್ ಕುಮಾರ್ ಜಾತ್ರೆ ಕಮಿಟಿ ಸದಸ್ಯ