ಕರಾಚಿ: ಕೋವಿಡ್-19 ವಿರುದ್ಧ ಹೋರಾಟಕ್ಕೆ ದೇಣಿಗೆ ಸಂಗ್ರಹಿಸಲು ಮುಚ್ಚಿದ ಕ್ರೀಡಾಂಗಣದಲ್ಲಿ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಬೇಕು ಎಂದು ಪಾಕ್ ಮಾಜಿ ಬೌಲರ್ ಶೋಯೆಬ್ ಅಖ್ತರ್ ಒತ್ತಾಯಿಸಿದ್ದರು. ಅದಕ್ಕೆ ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರು ವಿರೋಧ ವ್ಯಕ್ತಪಡಿಸಿದ್ದರು.
ಈಗ ಅದೇ ವಿಚಾರವನ್ನು ಶಾಹಿದ್ ಅಫ್ರಿದಿ ಪ್ರಸ್ತಾಪಿಸಿದ್ದಾರೆ. ಶೋಯೆಬ್ ಅಕ್ತರ್ ಅವರ ಅಭಿಪ್ರಾಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಡೀ ಜಗತ್ತು ಕರೊನಾ ವೈರಸ್ ವಿರುದ್ಧ ಹೋರಾಡುತ್ತಿದೆ. ಸದ್ಯದ ಮಟ್ಟಿಗೆ ಮನುಷ್ಯರ ವೈರಿ ಆಗಿರುವ ಕರೊನಾ ವೈರಸ್ನ್ನು ಮಣಿಸಲು ನಾವೆಲ್ಲ ಒಗ್ಗಟ್ಟಾಗಬೇಕು. ಹೀಗಿರುವಾಗ ಶೋಯೆಬ್ ಅಖ್ತರ್ ಹೇಳಿದ್ದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ಕಪಿಲ್ ದೇವ್ ಯಾಕೆ ನೆಗೆಟಿವ್ ಕಾಮೆಂಟ್ ನೀಡಿದರು ಗೊತ್ತಿಲ್ಲ. ಇಂಥ ಸಮಯದಲ್ಲಿ ಅದು ಸೂಕ್ತವಲ್ಲ. ಕಪಿಲ್ ದೇವ್ ಅವರ ಪ್ರತಿಕ್ರಿಯೆ ನನಗಂತೂ ಅಚ್ಚರಿ ಮೂಡಿಸಿದೆ ಎಂದರು.
ಶೋಯೆಬ್ ಅಖ್ತರ್ ಕ್ರಿಕೆಟ್ ಆಡಿಸಬೇಕು ಎಂದು ಹೇಳಿದ್ದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಬಹುದು ಎಂದು ಭಾವಿಸಿದ್ದೆ. ಆದರೆ ಇಂತಹ ಬಿಕ್ಕಟ್ಟಿನ ಸಮಯದಲ್ಲೂ ಕಪಿಲ್ ದೇವ್ ಹಾಗೆ ಮಾತಾಡಿದ್ದು ಸೂಕ್ತವಲ್ಲ ಎಂದು ಅಫ್ರಿದಿ ಹೇಳಿದ್ದಾರೆ.
ಶಾಹಿದ್ ಅಫ್ರಿದಿಯವರೂ ಕೂಡ ಲಾಕ್ಡೌನ್ನಿಂದ ಸಂಕಷ್ಟದಲ್ಲಿರುವವರಿಗೆ ತಮ್ಮ ಸಂಸ್ಥೆ ಮೂಲಕ ಸಹಾಯ ಮಾಡುತ್ತಿದ್ದಾರೆ. ಅವರಿಗೆ ಅಗತ್ಯ ರೇಷನ್ಗಳನ್ನು ಒದಗಿಸುತ್ತಿದ್ದಾರೆ.
ನಾನು ಹಲವು ಕಂಪನಿಗಳ ಪ್ರಮೋಶನ್ಗಾಗಿ, ಜಾಹೀರಾತುಗಳಿಗಾಗಿ ಕೆಲಸ ಮಾಡಿದ್ದೇನೆ. ಹಾಗೆ, ಕೆಲವು ಕಂಪನಿಗಳಿಗಳೊಂದಿಗೆ ಕೆಲಸ ಮಾಡಲು ಸಹಿ ಹಾಕಿದ್ದು, ಅವರು ನನಗೆ ಹಣ ಕೊಡುವುದು ಬೇಡ. ಬದಲಿಗೆ ಅಕ್ಕಿ, ಬೇಳೆ, ಅಡುಗೆ ಸಾಮಗ್ರಿಗಳನ್ನು ನನ್ನ ಪ್ರತಿಷ್ಠಾನಕ್ಕೆ ನೀಡಿ. ಅದನ್ನು ಕಷ್ಟದಲ್ಲಿರುವವರಿಗೆ ನೀಡುತ್ತೇನೆ ಎಂದು ಅಫ್ರಿದಿ ಟ್ವೀಟ್ ಮೂಲಕ ತಿಳಿಸಿದ್ದಾರೆ. (ಏಜೆನ್ಸೀಸ್)