ಬೆಂಗಳೂರು: ಜನವರಿ 1 ರಂದು, 68 ವರ್ಷದ ರಘುನಾಥ್ ಅವರು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ತಮ್ಮ ವಸತಿ ಲೇಔಟಲ್ಲಿ ಹೆಚ್ಚಿನ ಸಂಚಾರದ ಬಗ್ಗೆ ತಮ್ಮ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಗುಂಪಿಗೆ ಮೆಸೇಜ್ ಕಳಿಸಿದ್ದರು. ರಘುನಾಥ್, ತಮ್ಮ ಸಂದೇಶದಲ್ಲಿ ಸಂಚಾರವನ್ನು ನಿಯಂತ್ರಿಸಲು ಈ ಪ್ರದೇಶದಲ್ಲಿ ಇಬ್ಬರು ಕಾನ್ ಸ್ಟೆಬಲ್ ಗಳನ್ನು ನಿಯೋಜಿಸುವಂತೆ ಸಂಚಾರ ಪೊಲೀಸರಿಗೆ ವಿನಂತಿಸಬಹುದೇ ಎಂದು ಕೇಳಿದ್ದರು. ಇದಾದ ಒಂದೆರಡು ದಿನಗಳ ನಂತರ ಲೇಔಟ್ ಮೂಲಕ ನಡೆದುಕೊಂಡು ಹೋಗುತ್ತಿದ್ದ ರಘುನಾಥ್ ಗೆ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದಿದ್ದರಿಂದ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ರಘುನಾಥ್ ಅವರು ವಾಸಿಸುತ್ತಿದ್ದ ಕ್ಲಾಸಿಕ್ ಆರ್ಚರ್ಡ್ಸ್ ಲೇಔಟ್ ನಿವಾಸಿಗಳು, ಬನ್ನೇರುಘಟ್ಟ ರಸ್ತೆಯಲ್ಲಿ ಮೆಟ್ರೋ ನಿರ್ಮಾಣದಿಂದಾಗಿ, ಆದ ತಿರುವುಗಳಿಂದ ತೊಂದರೆಗೆ ಈಡಾಗಿದ್ದಾರೆ. ಇದು ಅವರ ಲೇಔಟ್ ಮೂಲಕ ಹಾದು ಹೋಗುವ ರಸ್ತೆಯಲ್ಲಿ ಭಾರಿ ಸಂಚಾರ ದಟ್ಟಣೆಗೆ ಉಂಟಾಗಿದೆ ಎಂದು ಅಲ್ಲಿನ ನಿವಾಸಿಗಳು ಹೇಳಿದ್ದಾರೆ.
“ಈ ವಸತಿ ಪ್ರದೇಶದಲ್ಲಿ ಮಕ್ಕಳು ಮತ್ತು ವೃದ್ಧರು ಸೇರಿದಂತೆ 1,500 ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಅಪಘಾತ ಸಂಭವಿಸುವ ಮೊದಲೇ, ನಿವಾಸಿಗಳಿಗೆ ಸಂಚಾರವನ್ನು ನಿಯಂತ್ರಿಸಲು ಕ್ರಮಗಳನ್ನು ಕೈಗೊಳ್ಳಲು ಪೊಲೀಸರು ಮತ್ತು ಬಿ.ಎಂ.ಆರ್.ಸಿಎಲ್ ನೊಂದಿಗೆ ಮಾತನಾಡಿದ್ದೆವು. ಬಿಎಂಆರ್ಸಿಎಲ್ ಈ ಮಾರ್ಗದಲ್ಲಿ ಸಂಚಾರವನ್ನು ನಿರ್ಬಂಧಿಸಿದ್ದರೂ, ಅವರು ನಿಯಮಗಳನ್ನು ಜಾರಿಗೊಳಿಸಲು ಏನೂ ಮಾಡಿಲ್ಲ. ಲೇಔಟ್ ಮೂಲಕ ಭಾರಿ ಸಂಚಾರ ದಟ್ಟಣೆ ಕಂಡುಬಂದಿದೆ” ಎಂದು ಕ್ಲಾಸಿಕ್ ಆರ್ಚರ್ಡ್ಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಸ್ವರೂಪ ಕಾಕುಮಾನು ಹೇಳಿದರು. (ಏಜೆನ್ಸೀಸ್)