ತರೀಕೆರೆ: ತಾಲೂಕಿನ ವಿವಿಧ ಗ್ರಾಮಗಳ ಜಮೀನುಗಳಲ್ಲಿ ಅಕ್ರಮವಾಗಿ ಕಡಿತಲೆ ಮಾಡಿ ಸಂಗ್ರಹಿಸಿದ್ದ ಲಕ್ಷಾಂತರ ರೂ. ಮೌಲ್ಯದ ಸಾಗವಾನಿ ಮರದ ತುಂಡುಗಳನ್ನು ಪಟ್ಟಣದ ಪೊಲೀಸರು ಪತ್ತೆಹಚ್ಚಿ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತಾಲೂಕಿನ ಸ್ಟೇಷನ್ ದುಗ್ಲಾಪುರದ ನಾಗರಾಜ್ ಬಂಧಿತ ಆರೋಪಿ. ಕೆಲವು ದಿನಗಳಿಂದ ವಿವಿಧ ಗ್ರಾಮಗಳ ಜಮೀನುಗಳಲ್ಲಿ ಬೆಳೆದು ನಿಂತಿದ್ದ ಬೆಲೆ ಬಾಳುವ ಸಾಗವಾನಿ ಮರಗಳ ಮೇಲೆ ಹಗಲು ಹೊತ್ತು ದೃಷ್ಟಿ ನೆಡುತ್ತಿದ್ದ ಆರೋಪಿ ನಾಗರಾಜ್ ಕತ್ತಲಾಗುತ್ತಿದ್ದಂತೆ ಕಡಿತಲೆ ಮಾಡಿ ಸ್ವಂತ ಮನೆ ಮತ್ತು ಜಮೀನಿನಲ್ಲಿ ಸಂಗ್ರಹಿಸಿಡುತ್ತಿದ್ದ.
ಮರ ಕಳವಾದಾಗಲೆಲ್ಲ ರೈತರು ದಾಖಲಿಸುತ್ತಿದ್ದ ದೂರಿನ ಮೇರೆಗೆ ಡಿವೈಎಸ್ಪಿ ಕೆ.ನಾಗರಾಜ್ ಮಾರ್ಗದರ್ಶನಲ್ಲಿ ಕಾರ್ಯಾಚರಣೆಗಿಳಿದ ಇನ್ಸ್ಪೆಕ್ಟರ್ ವೀರೇಂದ್ರ, ಸಬ್ಇನ್ಸ್ಪೆಕ್ಟರ್ ನಾಗೇಂದ್ರನಾಯ್ಕ ಹಾಗೂ ಕೃಷ್ಣಾನಾಯ್ಕ ನೇತೃತ್ವದ ತಂಡ ಬುಧವಾರ ಆರೋಪಿ ನಾಗರಾಜ್ ಮನೆ ಮತ್ತು ಜಮೀನಿನ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಅಂದಾಜು 7 ಲಕ್ಷ ರೂ. ಮೌಲ್ಯದ ಸಾಗವಾನಿ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಪ್ರೊಬೇಷನರಿ ಪಿಎಸ್ಐ ಧನಂಜಯ್, ಬಸವನಗೌಡ ಬಗಲಿ, ಮುಖ್ಯಪೇದೆ ನಾಗೇಶ್, ಪೇದೆಗಳಾದ ರುದ್ರೇಶ್, ಆರ್.ಕಾಂತೇಶ್, ನಂಜುಂಡಸ್ವಾಮಿ, ಅಣ್ಣಪ್ಪನಾಯ್ಕ, ವಾಹನ ಚಾಲಕ ಕಲ್ಲೇಶ್ನಾಯ್ಕ ಇದ್ದರು.